ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ 20 ಲಕ್ಷ ಕೋಟಿ ರೂಪಾಯಿ ವಿಶೇಷ ಪ್ಯಾಕೇಜ್ ಘೋಷಣೆ ಮಾಡಿದೆ.
ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಆರ್ಥಿಕ ಪ್ಯಾಕೇಜ್ 3 ಕುರಿತಾಗಿ ಇಂದು ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ್ದಾರೆ.
ಕೃಷಿ ಕ್ಷೇತ್ರಕ್ಕೆ 1 ಲಕ್ಷ ಕೋಟಿ ರೂಪಾಯಿ ಕೃಷಿ ಮೂಲಸೌಕರ್ಯ ನಿಧಿಯನ್ನು ಕಾಯ್ದಿರಿಸಲಾಗಿದೆ ಎಂದು ಹೇಳಿದ್ದಾರೆ. ಆಹಾರ ಧಾನ್ಯ ಸಂಗ್ರಹ ಕೇಂದ್ರಗಳ ನಿರ್ಮಾಣ, ಕೃಷಿ ಸಹಕಾರಿ ಸಂಘಗಳು, ಶೀತಲ ಸಂಗ್ರಹ ಕೇಂದ್ರ, ಸ್ಟಾರ್ಟಪ್ ಮೊದಲಾದವುಗಳಿಗೆ ಇದರಿಂದ ಅನುಕೂಲವಾಗಲಿದೆ. ಅಲ್ಲದೆ ಕೃಷಿ ಉತ್ಪನ್ನಗಳನ್ನು ರಫ್ತು ಮಾಡಲು ಕೂಡ ಅನುಕೂಲವಾಗುತ್ತದೆ ಎಂದು ತಿಳಿಸಿದ್ದಾರೆ.
ಕಿರು ಆಹಾರ ಉದ್ಯಮಗಳಿಗೆ 10,000 ಕೋಟಿ ರೂಪಾಯಿ ನೀಡಲಾಗಿದೆ. ಸಮುದಾಯ ಆಧಾರಿತ ವ್ಯವಸ್ಥೆಯಡಿ ಬ್ರಾಂಡಿಂಗ್ ಮತ್ತು ಮಾರ್ಕೆಟಿಂಗ್ ಉದ್ದೇಶದೊಂದಿಗೆ ಸ್ಥಳಿಯ ಆಹಾರ ಪದಾರ್ಥಗಳನ್ನು ಜಾಗತಿಕ ಮಟ್ಟದಲ್ಲಿ ಪ್ರಚುರಪಡಿಸಲು ಅನುದಾನ ನೀಡಲಾಗಿದೆ.
ಪ್ರಧಾನಮಂತ್ರಿ ಮತ್ಸ್ಯಸಂಪದ ಯೋಜನೆಯಡಿ ಮೀನುಗಾರರಿಗೆ 20,000 ಕೋಟಿ ರೂಪಾಯಿ ವಿಶೇಷ ಕೊಡುಗೆ ನೀಡಲಾಗಿದೆ. ಮೀನುಗಾರಿಕೆ ದೋಣಿ ಖರೀದಿ, ಬಂದರು ನಿರ್ಮಾಣ, ಬಲೆ, ಸಲಕರಣೆ ಖರೀದಿ ಮೊದಲಾದವುಗಳಿಗೆ ನೆರವು ನೀಡಲಾಗುವುದು.
ದೇಶದಲ್ಲಿ ಸುಮಾರು 53 ಕೋಟಿ ರಾಸುಗಳಿಗೆ ಕಾಲುಬಾಯಿ ರೋಗ ನಿರೋಧಕ ಲಸಿಕೆ ಹಾಕಿಸಲು 13,343 ಕೋಟಿ ರೂಪಾಯಿ ಅನುದಾನ ನೀಡಲಾಗಿದೆ. ಹೈನುಗಾರಿಕೆ ವಲಯಕ್ಕೆ 15,000 ಕೋಟಿ ರೂಪಾಯಿ, ಗಿಡಮೂಲಿಕೆಗಳ ಹರ್ಬಲ್ ಕಾರಿಡಾರ್ ಸೇರಿದಂತೆ ಹಲವು ಯೋಜನೆಗಳಿಗೆ 4,000 ಕೋಟಿ ರೂಪಾಯಿ ಔಷಧಿ ಕ್ಷೇತ್ರಕ್ಕೆ ಅನುದಾನ ನೀಡಲಾಗಿದೆ ಎಂದು ತಿಳಿಸಿದ್ದಾರೆ.