ವಿಜಯ್ ಮಲ್ಯ, ನೀರವ್ ಮೋದಿ ಮೊದಲಾದ ಉದ್ಯಮಿಗಳು ಬ್ಯಾಂಕುಗಳಿಗೆ ಸಾವಿರಾರು ಕೋಟಿ ರೂಪಾಯಿ ಪಂಗನಾಮ ಹಾಕಿ ವಿದೇಶಕ್ಕೆ ಪರಾರಿಯಾಗಿದ್ದಾರೆ. ಅಲ್ಲಿ ಅವರುಗಳು ಐಷಾರಾಮಿ ಜೀವನ ನಡೆಸುತ್ತಿದ್ದು, ಭಾರತದಲ್ಲಿ ಕಾನೂನು ಕಟಕಟೆಯಲ್ಲಿ ನಿಲ್ಲಿಸಲು ಈವರೆಗೂ ಸಾಧ್ಯವಾಗುತ್ತಿಲ್ಲ.
ಇದರ ಮಧ್ಯೆ ಮತ್ತೊಂದು ಕಂಪನಿ ವಿವಿಧ ಬ್ಯಾಂಕುಗಳಿಗೆ 411 ಕೋಟಿ ರೂಪಾಯಿ ವಂಚಿಸಿದ್ದು, ಇದರ ಮಾಲೀಕರುಗಳು ವಿದೇಶಕ್ಕೆ ಪರಾರಿಯಾಗಿದ್ದಾರೆ. ಅಚ್ಚರಿಯ ಸಂಗತಿಯೆಂದರೆ 2016 ರಲ್ಲೇ ಇವರುಗಳು ದೇಶ ಬಿಟ್ಟು ಹೋಗಿದ್ದರೂ ಇದೀಗ ಅವರುಗಳ ವಿರುದ್ಧ ದೂರು ದಾಖಲಿಸಲಾಗಿದೆ.
ವಿದೇಶಗಳಿಗೆ ಬಾಸ್ಮತಿ ಅಕ್ಕಿ ರಫ್ತು ಮಾಡುವ ದೆಹಲಿ ಮೂಲದ ಕಂಪನಿ ರಾಮದೇವ್ ಪ್ರೈವೇಟ್ ಲಿಮಿಟೆಡ್ ಮಾಲೀಕರಾದ ನರೇಶ್ ಕುಮಾರ್, ಸುರೇಶ್ ಕುಮಾರ್ ಹಾಗೂ ಸಂಗೀತ ವಿರುದ್ಧ ಸಿಬಿಐ ವಂಚನೆ ಪ್ರಕರಣದಲ್ಲಿ ದೂರು ದಾಖಲಿಸಿಕೊಂಡಿದ್ದು, ಇವರುಗಳು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾಗೆ 173 ಕೋಟಿ ರೂಪಾಯಿ, ಕೆನರಾ ಬ್ಯಾಂಕಿಗೆ 76 ಕೋಟಿ ರೂಪಾಯಿ, ಯೂನಿಯನ್ ಬ್ಯಾಂಕಿಗೆ 64 ಕೋಟಿ ರೂಪಾಯಿ, ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾಗೆ 51 ಕೋಟಿ ರೂಪಾಯಿ, ಕಾರ್ಪೋರೇಷನ್ ಬ್ಯಾಂಕಿಗೆ 36 ಕೋಟಿ ರೂಪಾಯಿ ಹಾಗೂ ಐಡಿಬಿಐ ಬ್ಯಾಂಕಿಗೆ 12 ಕೋಟಿ ರೂಪಾಯಿ ವಂಚಿಸಿದ್ದಾರೆಂದು ಹೇಳಲಾಗಿದೆ.