ಕರೋನಾ ವೈರಸ್ ನಿಯಂತ್ರಣಕ್ಕಾಗಿ ಮೂರನೇ ಹಂತದ ಲಾಕ್ ಡೌನ್ ವಿಸ್ತರಣೆ ಮಾಡಿರುವ ಕೇಂದ್ರ ಸರ್ಕಾರ ಗ್ರೀನ್ ಜೋನ್ ವಲಯದಲ್ಲಿ ಕೆಲವೊಂದು ವಿನಾಯಿತಿಗಳನ್ನು ನೀಡಿದೆ.
ಇದರಲ್ಲಿ ಬಸ್ ಸಂಚಾರಕ್ಕೆ ಅನುಮತಿಯೂ ಒಂದಾಗಿದ್ದು ಆದರೆ ಶೇಕಡಾ 50 ಪ್ರಯಾಣಿಕರು ಮಾತ್ರ ಪ್ರಯಾಣಿಸುವ ನಿರ್ಬಂಧ ಹೇರಲಾಗಿದೆ. ಇದು ಬಸ್ ಮಾಲೀಕರುಗಳ ಸಂಕಟಕ್ಕೆ ಕಾರಣವಾಗಿದೆ.
ಗಗನಮುಖಿಯಾಗಿರುವ ಡೀಸೆಲ್ ದರ, ಏರುಮುಖವಾಗಿರುವ ಬಸ್ ಬಿಡಿಭಾಗಗಳ ದರದ ನಡುವೆ ಈ ಮೊದಲೇ ಬಸ್ ಓಡಿಸಲು ಮೀನಾಮೇಷ ಎಣಿಸುತ್ತಿದ್ದ ಬಸ್ ಮಾಲೀಕರುಗಳು ಪ್ರಸ್ತುತ ವಿಧಿಸಲಾಗಿರುವ ನಿರ್ಬಂಧದೊಂದಿಗೆ ಬಸ್ ಓಡಿಸಲು ಸಾಧ್ಯವೇ ಇಲ್ಲ ಎಂದು ಹೇಳುತ್ತಿದ್ದಾರೆ.
ಶೇಕಡಾ 50 ಪ್ರಯಾಣಿಕರೊಂದಿಗೆ ಬಸ್ ಸಂಚಾರ ಆರಂಭಿಸಿದರೆ ಡೀಸೆಲ್ ದರ ಕೂಡ ವರ್ಕ್ ಔಟ್ ಆಗುವುದಿಲ್ಲ ಎಂಬ ಮಾತುಗಳು ಬಸ್ ಮಾಲೀಕರುಗಳಿಂದ ಕೇಳಿ ಬರುತ್ತಿದ್ದು, ಹೀಗಾಗಿ ಬಸ್ ಸಂಚಾರ ಆರಂಭಿಸಿ ದುಬಾರಿ ಟ್ಯಾಕ್ಸ್ ಕಟ್ಟುವ ಬದಲು ಸುಮ್ಮನಿರುವುದೇ ಲೇಸು ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.