4 ನೇ ಹಂತದ ಲಾಕ್ ಡೌನ್ ಜಾರಿ ಮಾಡಿರುವ ಕೇಂದ್ರ ಸರ್ಕಾರ ಇದರ ಮಧ್ಯೆ ಬಹಳಷ್ಟು ಸಡಿಲಿಕೆಗಳನ್ನು ಮಾಡಿದ್ದು, ಮೇ 25ರಿಂದ ದೇಶೀಯ ವಿಮಾನಯಾನ ಸೇವೆ ಆರಂಭಿಸಲು ಹಸಿರು ನಿಶಾನೆ ತೋರಿಸಿದೆ.
ವಿಮಾನದಲ್ಲಿ ಪ್ರಯಾಣಿಸುವ ಪ್ರಯಾಣಿಕರಿಗೆ ಹಲವು ಷರತ್ತುಗಳನ್ನು ವಿಧಿಸಲಾಗಿದ್ದು, ಮಾಸ್ಕ್ ಧರಿಸುವುದು ಹಾಗೂ ಸಾಮಾಜಿಕ ಅಂತರ ಕಾಪಾಡುವುದು ಕಡ್ಡಾಯವಾಗಿದೆ. ಅಲ್ಲದೆ ತಮ್ಮ ಸ್ಮಾರ್ಟ್ಫೋನ್ನಲ್ಲಿ ಪ್ರಯಾಣಿಕರು ಆರೋಗ್ಯ ಸೇತು ಆಪ್ ಅಳವಡಿಸಿಕೊಂಡಿರಲೇಬೇಕೆಂದು ಸೂಚಿಸಲಾಗಿದೆ.
ಪ್ರಯಾಣಿಕರು ಸ್ವಯಂ ಘೋಷಣಾ ಕರಾರು ಪತ್ರಕ್ಕೆ ಒಪ್ಪಿಗೆ ಸೂಚಿಸಬೇಕಾಗಿದ್ದು, ವಿಮಾನ ನಿಲ್ದಾಣಕ್ಕೆ ಬರಲು ಅಧಿಕೃತ ಟ್ಯಾಕ್ಸಿ ಬಳಸಬೇಕು ಹಾಗೂ ಡಿಜಿಟಲ್ ಪಾವತಿಗೆ ಒತ್ತು ನೀಡಬೇಕೆಂದು ತಿಳಿಸಲಾಗಿದೆ. ವಿಮಾನದಲ್ಲಿ ಒಂದು ಕ್ಯಾಬಿನ್ ಬ್ಯಾಗ್ ಮತ್ತು ಒಂದು ಚೆಕ್ ಇನ್ ಬ್ಯಾಗ್ ಮಾತ್ರ ತೆಗೆದುಕೊಂಡು ಹೋಗಲು ಅವಕಾಶವಿದೆ.
ವಯೋವೃದ್ಧರು, ಗರ್ಭಿಣಿಯರು ಹಾಗೂ ಅನಾರೋಗ್ಯ ಪೀಡಿತರು ಆದಷ್ಟು ವಿಮಾನ ಪ್ರಯಾಣವನ್ನು ಮುಂದೂಡುವುದು ಸೂಕ್ತ ಎಂದು ಹೇಳಲಾಗಿದ್ದು, ಪ್ರಯಾಣಿಕರು ತಮ್ಮ ಟಿಕೆಟ್ ಗಳನ್ನು ವೆಬ್ ಚೆಕ್ಕಿನ್ ಮಾಡಿಕೊಂಡು ಬೋರ್ಡಿಂಗ್ ಪಾಸ್ ಪಡೆಯಲು ತಿಳಿಸಲಾಗಿದೆ.
ಬ್ಯಾಗೇಜ್ ಟ್ಯಾಗ್ ಪಡೆದುಕೊಂಡ ಪ್ರಯಾಣಿಕರು ಅದನ್ನು ಕಾಣುವ ರೀತಿಯಲ್ಲಿ ಬ್ಯಾಗ್ ಮೇಲೆ ಅಂಟಿಸಬೇಕಿದೆ. ಒಂದು ವೇಳೆ ಬ್ಯಾಗೇಜ್ ಟ್ಯಾಗ್ ಪಡೆಯಲು ಸಾಧ್ಯವಾಗದಿದ್ದರೆ ಪಿಎನ್ಆರ್ ನಂಬರ್ ಜೊತೆಗೆ ಪ್ರಯಾಣಿಕರ ಹೆಸರು ಬರೆದು ಅಂಟಿಸಬೇಕಿದೆ. ಅಲ್ಲದೆ ಪ್ರಯಾಣಿಕರು ಎರಡು ಗಂಟೆ ಮುಂಚಿತವಾಗಿ ವಿಮಾನ ನಿಲ್ದಾಣದಲ್ಲಿ ತಪಾಸಣೆಗೆ ಹಾಜರಾಗಬೇಕಿದೆ.
ಪ್ರತಿಯೊಬ್ಬ ಪ್ರಯಾಣಿಕರ ಥರ್ಮಲ್ ಸ್ಕ್ರೀನಿಂಗ್ ಮಾಡಿದ ಬಳಿಕ ಒಂದು ವೇಳೆ ನಿಗದಿಗಿಂತ ಹೆಚ್ಚಿನ ಉಷ್ಣಾಂಶ ಬಂದ ವೇಳೆ ಅಂತಹ ಪ್ರಯಾಣಿಕರ ಪ್ರಯಾಣಕ್ಕೆ ಅವಕಾಶ ನೀಡುವುದಿಲ್ಲ. ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರು ಸೋಂಕು ತಗುಲದಂತೆ ಸ್ವಯಂ ಎಚ್ಚರಿಕೆ ವಹಿಸಬೇಕೆಂದು ತಿಳಿಸಲಾಗಿದೆ.
ಅಲ್ಲದೆ ಆರೋಗ್ಯ ಸೇತು ಆಪ್ ಮೂಲಕ ಪ್ರಯಾಣಿಕರು ತಮ್ಮ ಆರೋಗ್ಯ ಪರಿಸ್ಥಿತಿಯ ಕುರಿತು ಸಂಪೂರ್ಣ ಮಾಹಿತಿ ನೀಡಬೇಕಿದೆ. ಅಥವಾ ಸ್ವಯಂ ಘೋಷಣಾ ಪತ್ರದಲ್ಲಿ ತಿಳಿಸಬೇಕಿದೆ.