ಕೊರೊನಾ ವೈರಸ್ ನಿಯಂತ್ರಣಕ್ಕಾಗಿ ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಲಾಕ್ಡೌನ್ ನಿಂದಾಗಿ ಬಹುತೇಕರ ಬದುಕು ಮೂರಾಬಟ್ಟೆಯಾಗಿದೆ. ಲಾಕ್ಡೌನ್ ಸಂದರ್ಭದಲ್ಲಿ ಅಂಗಡಿ-ಮುಂಗಟ್ಟುಗಳನ್ನು ಸಂಪೂರ್ಣವಾಗಿ ಬಂದ್ ಮಾಡಿಸಿದ್ದು, ವಾಹನ ಸಂಚಾರವನ್ನೂ ಸ್ಥಗಿತಗೊಳಿಸಲಾಗಿತ್ತು.
ಮೂರನೇ ಹಂತದ ಲಾಕ್ ಡೌನ್ ವೇಳೆ ಆರ್ಥಿಕ ವಹಿವಾಟಿಗೆ ಅನುಕೂಲವಾಗುವಂತೆ ಕೆಲವೊಂದು ವಿನಾಯಿತಿಗಳನ್ನು ಘೋಷಿಸಿದ್ದು, ನಿಧಾನವಾಗಿ ಜನಜೀವನ ಸಹಜ ಸ್ಥಿತಿಗೆ ಬರುತ್ತಿದೆ. ಆದರೆ ಖಾಸಗಿ ಬಸ್ಸುಗಳ ಸಂಚಾರಕ್ಕೆ ಇನ್ನೂ ಅನುಮತಿ ಸಿಕ್ಕಿಲ್ಲ.
ಮೇ 17ರಂದು ಲಾಕ್ಡೌನ್ ಅಂತ್ಯಗೊಂಡ ಬಳಿಕ ಕೆಲವೊಂದು ನಿರ್ಬಂಧಗಳೊಂದಿಗೆ ಖಾಸಗಿ ಬಸ್ ಸಂಚಾರ ಆರಂಭಕ್ಕೆ ಅನುಮತಿ ಸಿಗಲಿದೆ ಎನ್ನಲಾಗುತ್ತಿದ್ದು, ಆದರೆ ಈ ನಿರ್ಬಂಧಗಳು ತಮಗೆ ಹೊರೆಯಾಗಿ ಪರಿಣಮಿಸಲಿದೆ ಎಂಬ ಮಾತುಗಳನ್ನು ಖಾಸಗಿ ಬಸ್ ಮಾಲೀಕರುಗಳು ಹೇಳುತ್ತಿದ್ದಾರೆ.
ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಸಲುವಾಗಿ ಬಸ್ ನಲ್ಲಿ ಶೇಕಡಾ 50 ಸೀಟುಗಳನ್ನು ಮಾತ್ರ ಭರ್ತಿ ಮಾಡಬೇಕೆಂದು ಸೂಚನೆ ನೀಡುವುದು ನಿಶ್ಚಿತವಾಗಿದ್ದು, ಇದನ್ನು ಅನುಸರಿಸಲು ಹೋದರೆ ತಮಗೆ ಡೀಸೆಲ್ ಖರ್ಚೂ ಸಹ ಗಿಟ್ಟುವುದಿಲ್ಲ ಎಂಬ ಅಳಲು ಖಾಸಗಿ ಬಸ್ ಮಾಲೀಕರುಗಳದ್ದು.
ಅಲ್ಲದೆ ಬಸ್ ಸಂಚಾರ ಆರಂಭಿಸಬೇಕೆಂದರೆ ಮೂರು ತಿಂಗಳ ಮುಂಗಡ ರಸ್ತೆ ತೆರಿಗೆ 50 ಸಾವಿರ ರೂಪಾಯಿ ಕಟ್ಟಬೇಕಿದೆ. ಜೊತೆಗೆ ಈವರೆಗೆ ಬಸ್ ನಿಲ್ಲಿಸಿರುವ ಕಾರಣ ಕೆಲವೊಂದು ದುರಸ್ತಿಗಳನ್ನು ಮಾಡಿಸಬೇಕಾಗುತ್ತದೆ. ಹೀಗಾಗಿ ವಿಮೆ, ರಸ್ತೆ ತೆರಿಗೆ ನಿಯಮಕ್ಕೆ ವಿನಾಯಿತಿ ನೀಡುವುದರ ಜೊತೆಗೆ ಒಂದಷ್ಟು ಅನುಕೂಲ ಮಾಡಿಕೊಟ್ಟರೆ ಮಾತ್ರ ಬಸ್ ಸಂಚಾರ ಆರಂಭಿಸಲು ಸಾಧ್ಯವಾಗುತ್ತದೆ ಎಂದು ಬಸ್ ಮಾಲೀಕರುಗಳು ಅಭಿಪ್ರಾಯಪಟ್ಟಿದ್ದಾರೆ.