ಕೊರೊನಾ ಸೋಂಕು ಶರವೇಗದಲ್ಲಿ ಹರಡುತ್ತಿರುವ ಹಿನ್ನೆಲೆಯಲ್ಲಿ ಸೋಂಕಿತರನ್ನು ಕಂಡು ಹಿಡಿಯುವುದು ಕಷ್ಟವಾಗುತ್ತದೆ ಎಂಬ ನಿಟ್ಟಿನಲ್ಲಿ ಹಲವಾರು ಮಾರ್ಗಗಳನ್ನು ಸರ್ಕಾರ ಕಂಡುಕೊಂಡಿದೆ. ಇದರ ಮತ್ತೊಂದು ಮಹತ್ವದ ಭಾಗ ಅಂದರೆ ಆರೋಗ್ಯ ಸೇತು ಆಪ್. ಈ ಆಪ್ನ ಅಭಿವೃದ್ಧಿಪಡಿಸಿ ಎಲ್ಲರೂ ಇದನ್ನು ಉಪಯೋಗಿಸುವಂತೆ ಸರ್ಕಾರ ಸೂಚಿಸಿದೆ. ಈ ಆಪ್ ಮೂಲಕ ತಮ್ಮನ್ನು ತಾವು ಪರೀಕ್ಷೆಗೆ ಒಳಪಡಿಸಿಕೊಳ್ಳಬಹುದಾಗಿದೆ.
ಆದರೆ ಈ ಆಪ್ ವೈಯಕ್ತಿಕ ಮಾಹಿತಿಯನ್ನು ಕಲೆ ಹಾಕಲಿದೆ. ಇದರಿಂದ ವ್ಯಕ್ತಿಯ ವೈಯಕ್ತಿಕ ಮಾಹಿತಿ ಸೋರಿಕೆಯಾಗುತ್ತದೆ ಎಂದು ಹಲವಾರು ಮಂದಿ ಆತಂಕ ವ್ಯಕ್ತಪಡಿಸುತ್ತಿದ್ದರು. ಅಲ್ಲದೆ ಸೇತು ಆಪ್ನ ಸುರಕ್ಷತೆಯ ಕುರಿತು ಅನೇಕ ತಜ್ಞರು ಪ್ರಶ್ನೆಗಳನ್ನು ಎತ್ತುತ್ತಿದ್ದಾರೆ.
ಹೀಗಾಗಿ ಸರ್ಕಾರ ಮತ್ತೊಂದು ಹೆಜ್ಜೆ ಮುಂದೆ ಹೋಗಿ ಈ ಆಪ್ನ ದೋಷಗಳು, ನ್ಯೂನ್ಯತೆಗಳು ಮತ್ತು ಉತ್ತಮ ಸಂಕೇತಗಳನ್ನು ತೋರಿಸುವವರಿಗೆ ನಗದು ಬಹುಮಾನ ನೀಡಲು ಮುಂದಾಗಿದೆ. ಈ ಮೂಲಕ ಆಪ್ ಎಷ್ಟು ಸುರಕ್ಷಿತವಾಗಿದೆ ಎಂಬುದನ್ನು ತೋರಿಸಲು ಪ್ರಯತ್ನಿಸುತ್ತಿದೆ.
ಈ ಅಪ್ಲಿಕೇಶನ್ ಅನ್ನು ಸುಧಾರಿಸಲು ಬಗ್ ಬೌಂಟಿ ಕಾರ್ಯಕ್ರಮ ಪ್ರಾರಂಭಿಸಲಾಗಿದೆ. ಈ ಅಪ್ಲಿಕೇಶನ್ನಲ್ಲಿ ಏನಾದರೂ ದೋಷ ಕಂಡು ಬಂದರೆ ಅಥವಾ ಯಾವುದೇ ಭದ್ರತಾ ನ್ಯೂನ್ಯತೆಗಳಿದ್ದು ಅದನ್ನು ಪತ್ತೆ ಹಚ್ಚಿದವರಿಗೆ 3 ಲಕ್ಷ ರೂಪಾಯಿಗಳವರೆಗೆ ನಗದು ಬಹುಮಾನ ನೀಡಲಾಗುತ್ತಿದೆ. ಈ ಪ್ರಕ್ರಿಯೆ ಮೇ 27 ರಿಂದ ಪ್ರಾರಂಭವಾಗಿ ಜೂನ್ 29 ರವರೆಗೆ ನಡೆಯಲಿದೆ.