ಬೆಂಗಳೂರು: ಕಿರುತೆರೆ ಧಾರವಾಹಿಗಳ ಚಿತ್ರೀಕರಣಕ್ಕೆ ಷರತ್ತುಗಳೊಂದಿಗೆ ಅನುಮತಿ ನೀಡಿರುವ ಸರ್ಕಾರ ಚಿತ್ರರಂಗದ ಅನೇಕ ಚಟುವಟಿಕೆ ನಡೆಸಲು ಅನುಮತಿ ನೀಡಲು ಒಪ್ಪಿದೆ.
ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಜೈರಾಜ್ ಈ ಕುರಿತಾಗಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಮನವಿ ಮಾಡಿದ್ದಾರೆ. ಲಾಕ್ ಡೌನ್ ಜಾರಿ ಮಾಡಿರುವುದರಿಂದ ಚಿತ್ರರಂಗಕ್ಕೆ ದೊಡ್ಡ ಪೆಟ್ಟು ಬಿದ್ದಿದೆ. ಚಿತ್ರೀಕರಣಕ್ಕೆ ಕೇಂದ್ರ ಸರ್ಕಾರ ಇನ್ನೂ ಸೂಚನೆ ನೀಡಿಲ್ಲ. ಆದರೆ, ಡಬ್ಬಿಂಗ್, ಎಡಿಟಿಂಗ್, ಹಿನ್ನೆಲೆ ಸಂಗೀತ, ಗ್ರಾಫಿಕ್ಸ್ ಮೊದಲಾದ ಕೆಲಸಗಳಿಗೆ ಅನುಮತಿ ಕೊಡಬೇಕೆಂದು ಮುಖ್ಯಮಂತ್ರಿಗೆ ಅವರು ಮನವಿ ಮಾಡಿದ್ದಾರೆ.
ಸಿನಿಮಾದ ಪೋಸ್ಟ್ ಪ್ರೊಡಕ್ಷನ್ ಕೆಲಸಗಳಿಗೆ ಅನುಮತಿ ನೀಡಲು ಸಿಎಂ ಒಪ್ಪಿದ್ದಾರೆ. ಚಿತ್ರೀಕರಣಕ್ಕೆ ಕೇಂದ್ರದಿಂದ ಸೂಚನೆ ಬರುವವರೆಗೆ ಕಾಯಬೇಕಿದೆ. ಸದ್ಯಕ್ಕೆ ಸಿನಿಮಾ ಡಬ್ಬಿಂಗ್, ರಿ ರೆಕಾರ್ಡಿಂಗ್, ಎಡಿಟಿಂಗ್ ಮೊದಲಾದ ಪೋಸ್ಟ್ ಪ್ರೊಡಕ್ಷನ್ ಕೆಲಸಗಳಿಗೆ ನಿಯಮಾನುಸಾರ ಅವಕಾಶ ನೀಡಲು ಒಪ್ಪಿದ್ದಾರೆ ಎನ್ನಲಾಗಿದೆ.