ಮುಂಬೈ: ಗುರುವಾರ ಬೆಳಿಗ್ಗೆ ಬಾಲಿವುಡ್ ನ ಹಿರಿಯ ನಟ ರಿಷಿ ಕಪೂರ್ ನಿಧನರಾದರು. ದೇಶದ ಗಣ್ಯರು ಆವರೊಟ್ಟಿಗಿನ ನೆನಪನ್ನು ಹಂಚಿಕೊಳ್ಳುತ್ತಿದ್ದಾರೆ. ಕೇಂದ್ರ ಸಚಿವೆ ಸ್ಮೃತಿ ಇರಾನಿ, ರಿಷಿ ಕಪೂರ್ ಜೊತೆಗಿನ ತಮ್ಮ ನೆನಪನ್ನು ಹಂಚಿಕೊಂಡಿದ್ದಾರೆ.
2014 ರಲ್ಲಿ ಬಿಜೆಪಿ ಸರ್ಕಾರ ರಚನೆಯಾಗಿ ತಮಗೆ ಮಂತ್ರಿ ಸ್ಥಾನಕ್ಕೆ ಪ್ರಮಾಣ ವಚನ ಸ್ವೀಕಾರ ಆಹ್ವಾನ ನೀಡಿದಾಗ, ವಿಷಯ ತಿಳಿದ ರಿಷಿ ಕಪೂರ್ “ಡೆಲ್ಲಿಗೆ ಬೇಗ ಓಡು “( ಭಾಗ್ ಜಲ್ದಿ ದಿಲ್ಲಿ ಪಾಗಲ್) ಎಂದು ಸಂತೋಷದಿಂದ ಹೇಳಿದ್ದನ್ನು ನೆನಪಿಸಿಕೊಂಡಿದ್ದಾರೆ. “ನಿಮ್ಮ ಕಾಳಜಿ, ನೀವು ಸೆಟ್ ನಲ್ಲಿ ಕೆಲಸ ಹೇಳಿಕೊಡುತ್ತಿದ್ದ ರೀತಿ, ನೀವು ಎಲ್ಲರನ್ನೂ ಪ್ರೇರೇಪಿಸುತ್ತಿದ್ದ ರೀತಿ ಮರೆಯಲಾಗಲ್ಲ. ನಾನು ನಿಮ್ಮನ್ನು ಕೊನೆಯ ಬಾರಿ ಸೆಟ್ ಒಂದರಲ್ಲಿ ಭೇಟಿಯಾದ ನೆನಪು” ಎಂದು ಅವರೊಟ್ಟಿಗಿನ ಫೋಟೋದೊಂದಿಗೆ ಇರಾನಿ ಟ್ವೀಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ಸ್ಮೃತಿ ಇರಾನಿ ಮತ್ತೊಂದು ಟ್ವೀಟ್ ಮಾಡಿದ್ದು ಅದರಲ್ಲಿ ” ಖನ್ನಾ, ಕಪೂರ್ ಮತ್ತು ಮಲ್ಹೋತ್ರಾ ಒಳ್ಳೆಯ ಜೀವನವನ್ನು ಪ್ರೀತಿಸುತ್ತಾರೆ. ಎಲ್ಲರೂ ಒಟ್ಟಾಗಿ ನಗುತ್ತಾ ಸ್ವರ್ಗವನ್ನೂ ಖುಷಿಯಾಗಿರಿಸುತ್ತಾರೆ – ನಾವು ನಿಮ್ಮನ್ನು ಮಿಸ್ ಮಾಡಿಕೊಳ್ಳುತ್ತೇವೆ ರಿಷಿ ಸರ್ ” ಎಂದು ಬರೆದುಕೊಂಡಿದ್ದಾರೆ.
67 ವರ್ಷದ ರಿಷಿ ಕಪೂರ್ 2018 ರಿಂದ ಕ್ಯಾನ್ಸರ್ ನಿಂದ ಬಳಲುತ್ತಿದ್ದರು. ಅಮೆರಿಕದಲ್ಲಿ ಚಿಕಿತ್ಸೆ ಪಡೆದು ಸೆಪ್ಟೆಂಬರ್ 2019 ರಲ್ಲಿ ಭಾರತಕ್ಕೆ ವಾಪಸ್ ಬಂದಿದ್ದರು. ಬುಧವಾರ ಆರೋಗ್ಯದಲ್ಲಿ ವ್ಯತ್ಯಾಸವಾದ ಕಾರಣ ಮುಂಬೈನ ರಿಲಯನ್ಸ್ ಹಾಸ್ಪಿಟಲ್ ಗೆ ದಾಖಲಾಗಿದ್ದರು. ರಿಷಿ ಕಪೂರ್ ಅವರ ಮಗಳು ರಿಧಿಮಾ ಕಪೂರ್ ಅವರಿಗೆ ತಂದೆಯ ಅಂತಿಮ ಕಾರ್ಯದಲ್ಲಿ ಭಾಗವಹಿಸಲು ದೆಹಲಿಯಿಂದ ಮುಂಬೈಗೆ ಬರಲು ವಿಶೇಷ ಅನುಮತಿ ನೀಡಲಾಗಿತ್ತು.