ಕೊರೊನಾ ನಿಯಂತ್ರಣಕ್ಕಾಗಿ ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಲಾಕ್ ಡೌನ್ ನಿಂದಾಗಿ ಯಾವುದೇ ಕೆಲಸ – ಕಾರ್ಯವಿಲ್ಲದೆ ಬಹಳಷ್ಟು ಮಂದಿ ಆರ್ಥಿಕವಾಗಿ ಕಂಗೆಟ್ಟಿದ್ದಾರೆ. ಮೂರನೇ ಹಂತದ ಲಾಕ್ ಡೌನ್ ಜಾರಿ ಸಂದರ್ಭದಲ್ಲಿ ಕೆಲವೊಂದು ವಿನಾಯಿತಿಗಳನ್ನು ನೀಡಿರುವ ಪರಿಣಾಮ ವ್ಯಾಪಾರ ವಹಿವಾಟುಗಳು ನಿಧಾನವಾಗಿ ಆರಂಭವಾಗಿವೆ.
ಆದರೆ ಕೆಲವೊಂದು ಕ್ಷೇತ್ರಗಳ ಕಾರ್ಯಾರಂಭಕ್ಕೆ ಇನ್ನೂ ಅನುಮತಿ ನೀಡಲಾಗಿಲ್ಲ. ಇದರಲ್ಲಿ ಮನೋರಂಜನಾ ಕ್ಷೇತ್ರವೂ ಒಂದು. ಹೀಗೆ ಲಾಕ್ ಡೌನ್ ನಿಂದ ಧಾರಾವಾಹಿಯಲ್ಲಿ ನಟಿಸುವ ಅವಕಾಶ ಸಿಗದೆ ಜೊತೆಗೆ ಸಾಲವೂ ಏರಿಕೆಯಾಗಿದ್ದರಿಂದ ನೊಂದ ಕಿರುತೆರೆ ನಟನೊಬ್ಬ ಆತ್ಮಹತ್ಯೆಗೆ ಶರಣಾಗಿದ್ದಾನೆ.
‘ಆದತ್ ಸೇ ಮಜ್ಬೂರ್’ ಸೇರಿ ಹಲವು ಧಾರಾವಾಹಿಗಳಲ್ಲಿ ನಟಿಸಿದ್ದ ಮನ್ಮೀತ್ ಗ್ರೆವಾಲ್ ನವಿ ಮುಂಬೈನ ತನ್ನ ಮನೆಯಲ್ಲಿ ನೇಣಿಗೆ ಶರಣಾಗಿದ್ದಾನೆ. ವಿಪರೀತ ಸಾಲ ಮಾಡಿಕೊಂಡಿದ್ದ ಈತ ಅತ್ತ ಕೆಲಸವೂ ಇಲ್ಲದೆ ಮನೆ ಬಾಡಿಗೆ ಕೂಡಾ ಕಟ್ಟಿರಲಿಲ್ಲವೆನ್ನಲಾಗಿದೆ.
ಮತ್ತೊಂದು ಮನಕುಲಕುವ ಸಂಗತಿಯೆಂದರೆ ಈತ ನೇಣು ಹಾಕಿಕೊಂಡಿದ್ದನ್ನು ನೋಡಿದ ಆತನ ಪತ್ನಿ, ಪತಿಯನ್ನು ಆಸ್ಪತ್ರೆಗೆ ಕರೆದೊಯ್ಯಲು ನೇಣಿನಿಂದ ಕೆಳಗಿಳಿಸುವಂತೆ ಅಕ್ಕಪಕ್ಕದವರಿಗೆ ಗೋಗರೆದರೂ ಕೊರೊನಾ ವೈರಸ್ ಭಯದಿಂದ ಯಾರೂ ಸಹಾಯಕ್ಕೆ ಬರಲಿಲ್ಲವೆನ್ನಲಾಗಿದೆ.