ಭೂಗತ ಲೋಕದ ಮಾಜಿ ದೊರೆ ಹಾಗೂ ಜಯ ಕರ್ನಾಟಕ ಸಂಘಟನೆಯ ಸಂಸ್ಥಾಪಕ ಮುತ್ತಪ್ಪ ರೈ ಇಂದು ಬೆಳಗಿನ ಜಾವ ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಕ್ಯಾನ್ಸರ್ ಕಾಯಿಲೆಯಿಂದ ಬಳಲುತ್ತಿದ್ದ ರೈ ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.
ಗುರುವಾರ ಸ್ಥಿತಿ ಗಂಭೀರವಾದ ಹಿನ್ನೆಲೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ನಿಧನ ಹೊಂದಿದ್ದಾರೆಂದು ಆಸ್ಪತ್ರೆ ಮೂಲಗಳು ತಿಳಿಸಿವೆ. ಅವರ ಸ್ವಗೃಹ ಬಿಡದಿಯಲ್ಲಿ ಅಂತಿಮ ವಿಧಿ ವಿಧಾನ ಕಾರ್ಯ ನಡೆಯಲಿದ್ದು, ಕೊರೊನಾ ಲಾಕ್ ಡೌನ್ ಹಿನ್ನೆಲೆಯಲ್ಲಿ ಕುಟುಂಬದ ಕೆಲವೇ ಮಂದಿಗಷ್ಟೆ ಅಂತಿಮ ಕಾರ್ಯದಲ್ಲಿ ಭಾಗವಹಿಸಲು ಅವಕಾಶ ಕಲ್ಪಿಸಲಾಗಿದೆ.
ಇದೆಲ್ಲದರ ನಡುವೆ ಮುತ್ತಪ್ಪ ರೈ ಅವರ ಜೀವನದ ಹಾದಿ ನಿಜಕ್ಕೂ ಎಲ್ಲರನ್ನು ನಿಬ್ಬೆರಗಾಗಿಸುತ್ತದೆ. ಇವರ ವಿಭಿನ್ನ ಜೀವನವನ್ನು ತೆರೆ ಮೇಲೆ ತರುವಂತಹ ಕೆಲಸ ಕೂಡ ಆಗಿತ್ತು. ಹೌದು, ಮುತ್ತಪ್ಪ ರೈ ಅವರ ಜೀವನ ಚರಿತ್ರೆಯನ್ನು ಸಿನಿಮಾ ಮಾಡಲು ಹೊರಟಿದ್ದು ನಿರ್ದೇಶಕ ರಾಮ್ ಗೋಪಾಲ್ ವರ್ಮಾ. ಈ ಸಿನಿಮಾದ ಫಸ್ಟ್ ಲುಕ್ ಕೂಡ ಬಿಡುಗಡೆಯಾಗಿತ್ತು. ಆದರೆ ಅದೇನಾಯ್ತೋ ಗೊತ್ತಿಲ್ಲ. ಸಿನಿಮಾ ಅಲ್ಲಿಗೆ ನಿಂತು ಹೋಯಿತು.
ಇನ್ನು ಇವರ ಜೀವನ ಚರಿತ್ರೆ ಸಿನಿಮಾದಲ್ಲಿ ಮುತ್ತಪ್ಪ ರೈ ಆಗಿ ಕಾಣಿಸಿಕೊಳ್ಳುತ್ತಿದ್ದದ್ದು ನಟ ವಿವೇಕ್ ಒಬೆರಾಯ್. ಈ ಸಿನಿಮಾ ಹಿಂದಿ, ತೆಲುಗು, ತಮಿಳು ಭಾಷೆಯಲ್ಲಿ ತೆರೆ ಮೇಲೆ ತರುವ ಉದ್ದೇಶ ಕೂಡ ಆರ್ಜಿವಿ ಗೆ ಇತ್ತು. ಆದರೆ ಅದ್ಯಾಕೆ ಈ ಸಿನಿಮಾ ನಿಂತಿತೋ ಗೊತ್ತಿಲ್ಲ. ಮುಂದಿನ ದಿನಗಳಲ್ಲಿ ಈ ಸಿನಿಮಾ ಚಿತ್ರೀಕರಣ ಮುಗಿಸಿ ತೆರೆಗೆ ಬರುತ್ತಾ ಕಾದು ನೋಡಬೇಕು.