ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಆಯುರ್ವೇದ ವೈದ್ಯರು ಅಲೋಪಥಿ ಔಷಧಿಗಳನ್ನ ರೋಗಿಗಳಿಗೆ ಶಿಫಾರಸು ಮಾಡಬಹುದು ಎಂದು ಆಯುರ್ವೇದ ವೈದ್ಯರಿಗೆ ಉತ್ತರಾಖಂಡ್ ಸರ್ಕಾರ ಅನುಮತಿ ನೀಡಿದೆ. ಆದರೆ ಉತ್ತರಾಖಂಡ್ನ ಈ ನಿರ್ಧಾರವನ್ನ ಸ್ವತಃ ಭಾರತೀಯ ವೈದ್ಯಕೀಯ ಸಂಘ, ಕಾನೂನು ಬಾಹಿರ ಎಂದು ಕರೆದಿದೆ.
ಉತ್ತರಾಖಂಡ್ ಸರ್ಕಾರದ ಮಹತ್ವದ ಘೋಷಣೆಯ ವಿಚಾರವಾಗಿ ಮಾತನಾಡಿದ ರಾಜ್ಯ ಆಯುಷ್ ಸಚಿವ ಹಾರಕ್ ಸಿಂಗ್, ಆಯುರ್ವೇದ ವೈದ್ಯರು ಬಹಳ ಸಮಯದಿಂದ ಇಟ್ಟಿದ್ದ ಬೇಡಿಕೆಗೆ ಸಿಎಂ ತಿರಥ್ ಸಿಂಗ್ ಹಸಿರು ನಿಶಾನೆ ತೋರಿದ್ದಾರೆ. ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ರೋಗಿಗಳಿಗೆ ಅಲೋಪಥಿ ಔಷಧಿಗಳನ್ನ ನೀಡುವ ಬಗ್ಗೆ ಆಯುರ್ವೇದ ವೈದ್ಯರು ಬಹುಕಾಲದಿಂದ ಇಟ್ಟ ಬೇಡಿಕೆಗೆ ನಾವು ಸಮ್ಮತಿ ನೀಡಿದ್ದೇವೆ. ಸರ್ಕಾರದ ಈ ಕ್ರಮದಿಂದಾಗಿ ಆರೋಗ್ಯ ಸೇವೆಗಳು ಇನ್ನಷ್ಟು ಸುಧಾರಿಸಬಹುದು ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ರು.
ಉತ್ತರಾಖಂಡ್ ಸರ್ಕಾರದ ಈ ಕ್ರಮವನ್ನ ವಿರೋಧಿಸಿ ಮಾತನಾಡಿದ ಉತ್ತರಾಖಂಡ್ ಐಎಂಎ ಅಧ್ಯಕ್ಷ ಡಾ. ಅರವಿಂದ್ ವರ್ಮಾ, ಸರ್ಕಾರದ ಈ ನಿರ್ಧಾರವು ವಿವಾದಾತ್ಮಕವಾಗಿದೆ. ಆಯುರ್ವೇದ ವೈದ್ಯರು ಅಲೋಪತಿ ಔಷಧಿಗಳನ್ನ ಕೊಡಬಹುದು ಅಂದಮೇಲೆ ಅಲೋಪತಿಯ ಬಗ್ಗೆ ಪ್ರಶ್ನೆ ಮಾಡಿದ್ದೇಕೆ ಎಂದು ಪ್ರಶ್ನಿಸಿದ್ದಾರೆ.
ಇನ್ನು ಇದೇ ವಿಚಾರವಾಗಿ ಮಾತನಾಡಿದ ಉತ್ತರಾಖಂಡ್ ಐಎಂಎ ಪ್ರಧಾನ ಕಾರ್ಯದರ್ಶಿ ಡಾ. ಅಜಯ್ ಖನ್ನಾ, ಸರ್ಕಾರದ ಈ ನಿರ್ಧಾರವು ಸಂಪೂರ್ಣ ಕಾನೂನು ಬಾಹಿರವಾಗಿದೆ ಎಂದು ಹೇಳಿದ್ದಾರೆ.
ಯೋಗ ಬಾಬಾ ರಾಮದೇವ್ ಅಲೋಪತಿ ಒಂದು ಮೂರ್ಖ ವಿಜ್ಞಾನವಾಗಿದೆ ಎಂದು ಹೇಳಿಕೆ ನೀಡಿದ ಬೆನ್ನಲ್ಲೇ ಆಯುರ್ವೇದ ಹಾಗೂ ಅಲೋಪಥಿ ವೈದ್ಯ ಪದ್ಧತಿಯ ಬಗ್ಗೆ ದೇಶದಲ್ಲಿ ಭಾರೀ ಚರ್ಚೆ ಶುರುವಾಗಿತ್ತು. ಬಾಬಾ ರಾಮದೇವ್ ಕೋವಿಡ್ ರೋಗಿಗಳ ಚಿಕಿತ್ಸೆಯಲ್ಲಿ ರೆಮಿಡಿಸಿವರ್ನಂತಹ ಔಷಧಿಗಳೇ ವಿಫಲವಾಗಿದೆ ಎಂದು ಆರೋಪಿಸಿದ್ದರು. ಬಾಬಾ ರಾಮ್ದೇವ್ ಆರೋಪಗಳ ವಿರುದ್ಧ ಉತ್ತರಾಖಂಡ್ ವೈದ್ಯಕೀಯ ಸಂಘ ಮಾನನಷ್ಟ ಮೊಕದ್ದಮೆ ಹೂಡಿತ್ತು.