
‘ರಾಜಕೀಯ ಎಂದಿಗೂ ನಿಲ್ಲುವುದಿಲ್ಲ, ಸರ್ಕಾರಗಳು ಬರುತ್ತವೆ. ಹೋಗುತ್ತವೆ. ಪಕ್ಷಗಳನ್ನು ಸ್ಥಾಪನೆ ಮಾಡಲಾಗುತ್ತದೆ. ನಾಶವಾಗುತ್ತವೆ. ಆದರೂ ದೇಶದ ಸಾರವನ್ನು ಕಳೆದುಕೊಳ್ಳಬಾರದು’ ಎಂದು ಅಟಲ್ ಬಿಹಾರಿ ವಾಜಪೇಯಿ ಹೇಳಿದ್ದರು.
ಮೂರು ಸಲ ಭಾರತದ ಪ್ರಧಾನ ಮಂತ್ರಿಯಾಗಿ ಆಡಳಿತ ನಡೆಸಿದ ಅಟಲ್ ಬಿಹಾರಿ ವಾಜಪೇಯಿ ದೂರವಾಗಿ ಇಂದಿಗೆ ಎರಡು ವರ್ಷ. 2 ನೇ ವರ್ಷದ ಪುಣ್ಯ ಸ್ಮರಣೆ ದಿನವಾದ ಇಂದು ಇಡೀ ದೇಶವೇ ಅವರನ್ನು ಸ್ಮರಿಸುತ್ತಿದೆ. ರಾಷ್ಟ್ರಪತಿ ರಾಮನಾಥ್ ಕೋವಿಂದ್, ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು, ಪ್ರಧಾನಿ ಮೋದಿ ಹಾಗೂ ಅವರ ಸಂಪುಟದ ಸದಸ್ಯರು ಸದೈವ್ ಆಟಲ್ ಸ್ಮಾರಕಕ್ಕೆ ತೆರಳಿ ನಮನ ಸಲ್ಲಿಸಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ ಯುಗಪುರುಷ ವಾಜಪೇಯಿ ಅವರಿಗೆ ಗೌರವ ನಮನ ಸಲ್ಲಿಸಲಾಗಿದೆ. ವಾಜಪೇಯಿ ಅಧಿಕಾರದಲ್ಲಿದ್ದ ಸಂದರ್ಭದಲ್ಲಿ ಭಾರತೀಯ ಇತಿಹಾಸದ ಕೆಲವು ಪ್ರಮುಖ ಕ್ಷಣಗಳಿಗೆ ಸಾಕ್ಷಿಯಾಗಿದ್ದಾರೆ. ರಾಜಸ್ಥಾನದ ಪೋಖ್ರಾನ್ ನಲ್ಲಿ 5 ಭೂಗತ ಪರಮಾಣು ಪರೀಕ್ಷೆಗಳನ್ನು ಯಶಸ್ವಿಯಾಗಿ ನಡೆಸಲಾಗಿತ್ತು. ಪರಮಾಣು ಶಸ್ತ್ರಾಗಾರವನ್ನು ನಿರ್ಮಿಸಲಾಗಿತ್ತು.
ಪಾಕಿಸ್ತಾನ ಅಧ್ಯಕ್ಷ ನವಾಜ್ ಶರೀಫ್ ಅವರೊಂದಿಗೆ 1999 ರಲ್ಲಿ ಶಾಂತಿಯುತ ಭೇಟಿ ನಡೆಸಿ ಸ್ನೇಹ ಸಂಬಂಧ, ಶಾಂತಿ ಸ್ಥಾಪನೆಗೆ ಪ್ರಯತ್ನ ನಡೆಸಿದ್ದರು. ದುರದೃಷ್ಟವೆಂಬಂತೆ ಅವರ ಅವಧಿಯಲ್ಲಿ ಸಂಸತ್ ಮೇಲೆ ದಾಳಿ, ಗೋಧ್ರಾ ಗಲಭೆಗಳು ನಡೆದವು. ಅದರ ಹೊರತಾಗಿಯೂ ವಾಜಪೇಯಿ ಪಕ್ಷಾತೀತ ನಾಯಕರಾಗಿ ಮನ್ನಣೆ ಗಳಿಸಿದ ನಾಯಕನಾಗಿದ್ದಾರೆ.
ಕಾವ್ಯದ ಮೇಲಿನ ಅವರ ಪ್ರೀತಿಯ ಅಪಾರವಾಗಿದ್ದು ಲೋಕಸಭೆ ಚರ್ಚೆಯ ಸಂದರ್ಭದಲ್ಲಿ, ಭಾಷಣ ಮಾಡುವಾಗ ವಾಜಪೇಯಿ ಕವಿತೆಗಳನ್ನು ವಾಚಿಸುತ್ತಿದ್ದರು. 2018 ಆಗಸ್ಟ್ 16ರಂದು ಅವರು ಕೊನೆಯುಸಿರೆಳೆದರು. ವಾಜಪೇಯಿ ಅವರ ಪುಣ್ಯಸ್ಮರಣೆ ವೇಳೆಯಲ್ಲಿ ಅವರ ವ್ಯಕ್ತಿತ್ವ ಸ್ಮರಿಸಲಾಗುತ್ತಿದೆ.
ವಾಜಪೇಯಿ ನಾಯಕತ್ವದಲ್ಲಿ ಭಾರತ ಅಭಿವೃದ್ಧಿ ಕಂಡಿತ್ತು. ಕೊಳಕು ರಾಜಕೀಯ ನಿರ್ಮೂಲನೆ ಮಾಡಲು ಮತ್ತು ದೇಶವಾಸಿಗಳಲ್ಲಿ ಸಾಮರಸ್ಯ ಬೆಳೆಸಲು ಶ್ರಮಿಸಿದ ಕ್ರಾಂತಿಕಾರಿ ಅವರು ಎಂದು ಜಾಲತಾಣದಲ್ಲಿ ಕೊಂಡಾಡಲಾಗಿದೆ. ಪ್ರಧಾನಿ ಮೋದಿ ವಾಜಪೇಯಿ ಅವರ ಹಳೆಯ ಫೋಟೋ ಮತ್ತು ವಿಡಿಯೋಗಳು ಮಾಹಿತಿಯನ್ನು ಪೋಸ್ಟ್ ಮಾಡಿದ್ದಾರೆ.