ಜಯಲಲಿತಾ ಸಾವನ್ನಪ್ಪಿದ ನಂತರ ಅವರ ಆಸ್ತಿ ವಿಚಾರವಾಗಿ ದೊಡ್ಡ ಮಟ್ಟದಲ್ಲಿ ಚರ್ಚೆಗಳು, ವಾದ – ವಿವಾದಗಳು ನಡೆದಿದ್ದವು. ಅವರ ಸಾವಿನ ನಂತರ ಆಸ್ತಿಗಾಗಿ ತಮಿಳುನಾಡಿನಲ್ಲಿ ಏನೆಲ್ಲಾ ನಡೆದಿದೆ ಎಂಬುದು ಗೊತ್ತಿರುವ ವಿಚಾರವೇ. ಆದರೆ ಇದೀಗ ಅಂತೂ ತಮಿಳುನಾಡಿನ ಮಾಜಿ ಮುಖ್ಯಮಂತ್ರಿ, ಜಯಲಲಿತಾ ಅವರ 900 ಕೋಟಿಗೂ ಹೆಚ್ಚು ಮೌಲ್ಯದ ಆಸ್ತಿಗೆ ಉತ್ತರಾಧಿಕಾರಿಗಳು ಸಿಕ್ಕಿದ್ದಾರೆ.
ಜಯಲಲಿತಾ ಅವರ ಸಹೋದರ ಜೆ. ಜಯಕುಮಾರ್ ಅವರ ಮಕ್ಕಳಾದ ಜೆ. ದೀಪಾ ಮತ್ತು ಜೆ. ದೀಪಕ್ ಅವರೇ ಉತ್ತರಾಧಿಕಾರಿಗಳು. ಇವರಿಗೆ ಎಲ್ಲ ಆಸ್ತಿ ಸಿಗಬೇಕು. ಇವರೇ ಆ ಆಸ್ತಿಗೆ ವಾರಸುದಾರರು ಎಂದು ಮದ್ರಾಸ್ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ. ಜಯಲಲಿತಾರಿಗೆ ವಿವಾಹವಾಗಿಲ್ಲ. ಇನ್ನು ಉಳಿದಿರುವುದು ಅವರ ಸೋದರ ಜೆ. ಜಯಕುಮಾರ್ ಅವರ ಮಕ್ಕಳು. ಹಿಂದೂ ಉತ್ತರಾಧಿಕಾರ ಕಾಯ್ದೆ ಪ್ರಕಾರ, ಇವರು ಕ್ಲಾಸ್ 2 ವಾರಸುದಾರರಾಗುತ್ತಾರೆ ಎಂದು ಕೋರ್ಟ್ ಹೇಳಿದೆ.
ಇನ್ನು ಮತ್ತೊಂದು ಮಹತ್ವದ ವಿಚಾರವನ್ನೂ ತೀರ್ಪಿನ ಸಂದರ್ಭದಲ್ಲಿ ಹೈಕೋರ್ಟ್ ಹೇಳಿದೆ. ಚೆನ್ನೈಯ ಪೋಯೆಸ್ ಗಾರ್ಡನ್ನಲ್ಲಿರುವ ಜಯಲಲಿತಾ ಅವರ ಅಧಿಕೃತ ನಿವಾಸ ವೇದ ನಿಲಯಂವನ್ನು ಸರಕಾರಿ ಸ್ಮಾರಕವನ್ನಾಗಿ ಮಾಡಬೇಕೇ ಎಂಬ ಬಗ್ಗೆ ಪುನರ್ ಪರಿಶೀಲನೆ ಮಾಡಿ ಎಂದು ತಮಿಳುನಾಡು ಸರಕಾರಕ್ಕೆ ಸಲಹೆ ನೀಡಿದೆ. ಈ ರೀತಿ ಖಾಸಗಿ ಕಟ್ಟಡಗಳನ್ನು ಜನರ ಹಣವನ್ನು ಬಳಕೆ ಮಾಡಿ ವಶಪಡಿಸಿಕೊಳ್ಳುವುದು ಸರಿಯಲ್ಲ. ಇದು ಮುಗಿಯದ ಪ್ರಕ್ರಿಯೆ. ಇದಕ್ಕೆ ಬದಲಾಗಿ ಇದೇ ನಿವಾಸದಲ್ಲಿ ಅಲ್ಪ ಭಾಗವನ್ನು ಸ್ಮಾರಕವಾಗಿ ಹಾಗೂ ಉಳಿದ ಭಾಗವನ್ನು ಖಾಯಂ ಆಗಿ ಮುಖ್ಯಮಂತ್ರಿಗಳ ನಿವಾಸ ಮತ್ತು ಕಚೇರಿ ಮಾಡಿ ಎಂದು ಕೋರ್ಟ್ ಹೇಳಿದೆ.