ತಿರುವನಂತಪುರಂ: ಎರಡು ಬಾರಿ ಹಾವು ಕಚ್ಚಿದ ಪರಿಣಾಮ ಮಹಿಳೆ ಮೃತಪಟ್ಟ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದೆ. ಪತಿಯೇ ಹಾವಾಡಿಗನ ಮೂಲಕ ಪತ್ನಿಗೆ ಹಾವು ಕಚ್ಚಿಸಿ ಕೊಲೆ ಮಾಡಿರುವ ಸಂಗತಿ ಪೊಲೀಸ್ ತನಿಖೆಯಲ್ಲಿ ಬಯಲಾಗಿದೆ.
ಮೃತ ಮಹಿಳೆಯ ತಂದೆ ಏರಂ ವೆಲ್ಲಾಶೇರಿಯ ಜಯಸೇನ ಅವರು ನೀಡಿದ್ದ ದೂರಿನ ಅನ್ವಯ ಪ್ರಕರಣದ ತನಿಖೆ ಕೈಗೊಂಡ ಪೊಲೀಸರು ಮೂವರನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಉತ್ತರಾ(25) ಎಂಬ ಮಹಿಳೆಗೆ ಮೂರು ತಿಂಗಳ ಹಿಂದೆ ಹಾವು ಕಚ್ಚಿದ್ದು ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವಾಗಲೇ ಮೇ 7 ರಂದು ಎರಡನೇ ಸಲ ಅವರು ಹಾವು ಕಚ್ಚಿ ಮೃತಪಟ್ಟಿದ್ದಾರೆ.
ಉತ್ತರಾ ಪೋಷಕರು ಅಳಿಯನ ಮೇಲೆ ಅನುಮಾನ ವ್ಯಕ್ತಪಡಿಸಿ ಪೊಲೀಸರಿಗೆ ದೂರು ನೀಡಿದ್ದಾರೆ. ವರದಕ್ಷಿಣೆಗಾಗಿ ಪತಿ, ಪತ್ನಿಗೆ ಕಿರುಕುಳ ನೀಡುತ್ತಿದ್ದ. ಅಲ್ಲದೆ ಮದುವೆ ಸಮಯದಲ್ಲಿ ನೀಡಿದ ಆಭರಣಗಳನ್ನು ದೋಚಿದ್ದ ಎನ್ನುವುದು ಪೊಲೀಸರ ತನಿಖೆಯಲ್ಲಿ ಗೊತ್ತಾಗಿದ್ದು, ವಿಚಾರಣೆ ಮುಂದುವರೆಸಿದ್ದಾರೆ.
ಪತಿ ಸೂರಜ್ 5 ತಿಂಗಳಿನಿಂದ ಪತ್ನಿ ಕೊಲೆಗೆ ಸಂಚು ರೂಪಿಸಿದ್ದ ಎನ್ನುವುದು ತಿಳಿದುಬಂದಿದೆ. ಖಾಸಗಿ ಬ್ಯಾಂಕ್ ಒಂದರಲ್ಲಿ ಕೆಲಸ ಮಾಡುತ್ತಿದ್ದ ಸೂರಜ್ 10 ಸಾವಿರ ರೂಪಾಯಿ ಕೊಟ್ಟು ಹಾವಾಡಿಗ ಸುರೇಶ್ ಎಂಬುವವನಿಂದ ಹಾವನ್ನು ತಂದಿದ್ದು ತನ್ನ ಕೊಠಡಿಯಲ್ಲಿ ಬಿಟ್ಟು ಪತ್ನಿಗೆ ಕಚ್ಚುವಂತೆ ಮಾಡಿದ್ದ.
ಮೊದಲ ಸಲ ಹಾವು ಕಚ್ಚಿದಾಗ ಪತ್ನಿ ಸಾಯಲಿಲ್ಲ. ಅದೃಷ್ಟವಶಾತ್ ಆಕೆ ಬದುಕುಳಿದಿದ್ದಾರೆ. ಆದರೆ, ಎರಡನೇ ಸಲ ಅದೃಷ್ಟ ಕೈಕೊಟ್ಟಿದ್ದು, ಆಸ್ಪತ್ರೆಯಲ್ಲಿ ಹಾವು ಕಚ್ಚಿದಾಗ ಮೃತಪಟ್ಟಿದ್ದಾರೆ ಎನ್ನುವುದು ತನಿಖೆಯಲ್ಲಿ ಗೊತ್ತಾಗಿದ್ದು ಮೃತ ಗಾಯತ್ರಿ ಪತಿ ಸೂರಜ್, ಹಾವಾಡಿಗ ಸುರೇಶ್, ಸಹಚರನೊಬ್ಬನನ್ನು ವಶಕ್ಕೆ ಪಡೆಯಲಾಗಿದೆ. ಪೊಲೀಸರು ತನಿಖೆ ಮುಂದುವರೆಸಿದ್ದಾರೆ.