ನವದೆಹಲಿ: ದೇಶದ ಬೆನ್ನೆಲುಬಾಗಿರುವ ಅನ್ನದಾತರಿಗೆ ವಿಶೇಷ ಪ್ಯಾಕೇಜ್ ನಲ್ಲಿ ನೆರವು ಘೋಷಿಸಲಾಗಿದೆ. ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಪ್ಯಾಕೇಜ್ ನಲ್ಲಿ ಘೋಷಣೆಯಾದ ಯೋಜನೆಗಳ ಕುರಿತಾಗಿ ಮಾಹಿತಿ ನೀಡಿದ್ದು ರೈತರಿಗೆ ಕೇಂದ್ರದಿಂದ ಹೆಚ್ಚುವರಿಯಾಗಿ ಸಾಲ ಸೌಲಭ್ಯ ಕಲ್ಪಿಸಲಾಗುವುದು ಎಂದು ಹೇಳಿದ್ದಾರೆ.
25 ಕೋಟಿ ರೈತರಿಗೆ ಕಿಸಾನ್ ಕ್ರೆಡಿಟ್ ಕಾರ್ಡ್ ಮೂಲಕ, ಸಹಕಾರ ಸಂಘಗಳು ಮತ್ತು ಗ್ರಾಮೀಣ ಬ್ಯಾಂಕುಗಳ ಮೂಲಕ ಸಾಲದ ನೆರವು ನೀಡಲಾಗುವುದು. ಇದಕ್ಕಾಗಿ 30,000 ಕೋಟಿ ರೂ. ಅನುದಾನ ಕಾಯ್ದಿರಿಸಲಾಗಿದೆ. ಅನುದಾನವನ್ನು ನಬಾರ್ಡ್ ಗೆ ತುರ್ತಗಿ ಬಿಡುಗಡೆ ಮಾಡಲಾಗುವುದು ಎಂದು ಹೇಳಿದ್ದಾರೆ.
ಕಿಸಾನ್ ಕ್ರೆಡಿಟ್ ಕಾರ್ಡ್ ಗಳಲ್ಲಿ ಮೀನುಗಾರರು ಮತ್ತು ಹೈನುಗಾರಿಕೆಯಲ್ಲಿ ತೊಡಗಿದವರನ್ನೂ ಸೇರ್ಪಡೆಗೊಳಿಸಲಾಗಿದೆ. ಮೂಲಕ 25 ಕೋಟಿ ರೈತರಿಗೆ ಅನುಕೂಲವಾಗುತ್ತದೆ. ಕಳೆದ ಎರಡು ತಿಂಗಳ ಅವಧಿಯಲ್ಲಿ 25 ಲಕ್ಷ ಸಾಲಗಳನ್ನು ವಿತರಿಸಲಾಗಿದೆ ಎಂದು ಸಚಿವರು ಮಾಹಿತಿ ನೀಡಿದ್ದಾರೆ.
ಲಾಕ್ಡೌನ್ ಜಾರಿಗೆ ಬಂದ ನಂತರವೂ ರೈತರಿಗೆ ಸಾಲ ಸೌಲಭ್ಯ ಕಲ್ಪಿಸಲಾಗಿದೆ. ಅದೇ ರೀತಿ 3 ಕೋಟಿ ರೈತರ 4.22 ಲಕ್ಷ ಕೋಟಿ ಮೊತ್ತದ ಸಾಲಗಳಿಗೆ ಮೂರು ತಿಂಗಳ ಕಂತು ಮುಂದೂಡಿಕೆ ಅವಕಾಶ ನೀಡಲಾಗಿದೆ. ಮಾರ್ಚ್ 1 ರಿಂದ ಏಪ್ರಿಲ್ 30ರ ಅವಧಿಯಲ್ಲಿ 86000 ಕೋಟಿ ರೂಪಾಯಿ ಮೊತ್ತದ 63 ಲಕ್ಷ ಕೃಷಿ ಸಾಲಗಳನ್ನು ವಿತರಣೆ ಮಾಡಲಾಗಿದೆ. ಹಾಲಿ ಕೃಷಿ ಸಾಲಗಳ ಮೇಲಿನ ಬಡ್ಡಿ ಬಡ್ಡಿಗೆ ನೀಡಲಾಗುತ್ತಿರುವ ವಿನಾಯಿತಿಯನ್ನು 2020ರ ಮೇ 31 ರವರೆಗೆ ವಿಸ್ತರಿಸಲಾಗಿದೆ. ಸಾಲ ಮರುಪಾವತಿಸುವವರಿಗೆ ನೀಡುತ್ತಿರುವ ಪ್ರೋತ್ಸಾಹ ಧನ ಯೋಜನೆ ಕೂಡ ಮೇ 31ರವರೆಗೆ ವಿಸ್ತರಣೆಯಾಗಿದೆ ಎಂದು ಹೇಳಲಾಗಿದೆ.