ಮುಳಬಾಗಿಲು ತಾಲೂಕಿನ ಮುಷ್ಟೂರು ಗ್ರಾಮದಲ್ಲಿ ಮದ್ಯದ ಅಮಲಿನಲ್ಲಿ ಹಾವನ್ನು ಹಿಂಸಿಸಿ ಕಚ್ಚಿ ಕೊಂದ ಆರೋಪಿಯನ್ನು ಅರಣ್ಯ ಇಲಾಖೆ ಸಿಬ್ಬಂದಿ ಬಂಧಿಸಿದ್ದಾರೆ.
ಕುಮಾರ್ ಬಂಧಿತ ಆರೋಪಿ. ವನ್ಯಜೀವಿ ಸಂರಕ್ಷಣೆ ಕಾಯ್ದೆಯಡಿ ಕುಮಾರ್ ವಿರುದ್ಧ ಪ್ರಕರಣ ದಾಖಲಾಗಿದೆ. ದೋಬಿ ಕೆಲಸ ಮಾಡಿಕೊಂಡಿರುವ ಕುಮಾರ್ ಮದ್ಯದ ನಶೆಯಲ್ಲಿ ರಸ್ತೆಗೆ ಅಡ್ಡ ಬಂದ ಹಾವನ್ನು ಕೈಯಲ್ಲಿ ಹಿಡಿದು ಹಿಂಸಿಸಿ ಬಾಯಲ್ಲಿ ಕಚ್ಚಿ ಕೊಂದು ಹಾಕಿದ್ದಾನೆ. ಅದರ ಚರ್ಮ ಸುಲಿದು ವಿಕೃತವಾಗಿ ವರ್ತಿಸಿದ್ದು ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿತ್ತು.
ಘಟನೆಯ ಬಳಿಕ ಪರಾರಿಯಾಗಿದ್ದ ಆರೋಪಿಯನ್ನು ಅರಣ್ಯ ಇಲಾಖೆ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಬಂಧಿಸಿ ನ್ಯಾಯಾಧೀಶರ ಎದುರು ಹಾಜರುಪಡಿಸಿದ್ದಾರೆ. ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.