ಮಹಾಮಾರಿ ಕರೋನಾ ನಿಯಂತ್ರಣಕ್ಕಾಗಿ ಕೇಂದ್ರ ಸರ್ಕಾರ ದೇಶದಾದ್ಯಂತ ಲಾಕ್ ಡೌನ್ ಜಾರಿಗೊಳಿಸಿದ್ದು, ಮೇ 3ರವರೆಗೆ ಇದು ಮುಂದುವರಿಯಲಿದೆ. ಪರಿಸ್ಥಿತಿಯನ್ನು ಅವಲೋಕಿಸಿ ಏಪ್ರಿಲ್ 20ರ ನಂತರ ರಾಜ್ಯ ಸರ್ಕಾರಗಳು ಲಾಕ್ ಡೌನ್ ಸಡಿಲಿಕೆ ಕುರಿತಂತೆ ಕೆಲ ತೀರ್ಮಾನಗಳನ್ನು ಕೈಗೊಳ್ಳಬಹುದು ಎಂದು ಕೇಂದ್ರ ಸರ್ಕಾರ ಹೇಳಿದ್ದು, ಇದನ್ನು ಅನುಷ್ಠಾನಗೊಳಿಸಲು ಹೋಗಿದ್ದ ರಾಜ್ಯ ಸರ್ಕಾರ ಕೊನೆಕ್ಷಣದಲ್ಲಿ ಇದನ್ನು ಹಿಂಪಡೆದಿದೆ.
ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ್ದ ಮುಖ್ಯಮಂತ್ರಿ ಯಡಿಯೂರಪ್ಪನವರು ಏಪ್ರಿಲ್ 20ರ ಬಳಿಕ ರಾಜ್ಯದಲ್ಲಿ ದ್ವಿಚಕ್ರವಾಹನ ಸಂಚರಿಸಬಹುದು. ವಾಹನ ಸವಾರರು ಯಾವುದೇ ಪಾಸ್ ಪಡೆಯುವ ಅಗತ್ಯವಿಲ್ಲ. ತಮ್ಮ ಐಡೆಂಟಿಟಿ ಕಾರ್ಡ್ ತೋರಿಸಿದರೆ ಸಾಕು ಎಂದು ಹೇಳಿದ್ದರು. ಅಲ್ಲದೆ ಐಟಿಬಿಟಿ ಕಂಪನಿಗಳಲ್ಲಿ ಶೇಕಡಾ 50ರಷ್ಟು ನೌಕರರು ಕಾರ್ಯ ನಿರ್ವಹಿಸಬಹುದು ಎಂದು ಹೇಳಿದ್ದರು. ಮುಖ್ಯಮಂತ್ರಿಗಳ ಹೇಳಿಕೆಗೆ ಕೆಲ ಹಿರಿಯ ಅಧಿಕಾರಿಗಳ ಸಲಹೆ ಕಾರಣವೆಂದು ಹೇಳಲಾಗಿದೆ.
ಯಡಿಯೂರಪ್ಪನವರು ಈ ನಿರ್ಧಾರ ಪ್ರಕಟಿಸಿದ ಕೇವಲ 6 ಗಂಟೆಯೊಳಗೆ ಅದನ್ನು ಹಿಂಪಡೆದಿದ್ದಾರೆ. ಲಾಕ್ ಡೌನ್ ಸಡಿಲಿಕೆ ನಿರ್ಧಾರಕ್ಕೆ ಸಾರ್ವಜನಿಕ ವಲಯದಿಂದ ತೀವ್ರ ವಿರೋಧ ವ್ಯಕ್ತವಾಗಿದ್ದಲ್ಲದೆ ಮಾಧ್ಯಮಗಳು ಕೂಡಾ ಇದನ್ನು ಕಟುವಾಗಿ ಪ್ರಶ್ನಿಸಿದ್ದವು. ಅಲ್ಲದೆ ಕೆಲ ಹಿರಿಯ ಸಚಿವರು, ಲಾಕ್ ಡೌನ್ ಸಡಿಲಿಸಿದರೆ ಕರೋನಾ ವೈರಸ್ ನಿಯಂತ್ರಣಕ್ಕಾಗಿ ಸರ್ಕಾರ ಇದುವರೆಗೂ ಕೈಗೊಂಡ ಕ್ರಮಗಳು ವ್ಯರ್ಥವಾಗುತ್ತದೆ ಎಂದು ಹೇಳಿದ್ದರೆನ್ನಲಾಗಿದೆ. ಈ ಎಲ್ಲದರ ಹಿನ್ನೆಲೆಯಲ್ಲಿ ಕೊನೆಕ್ಷಣದಲ್ಲಿ ಯಡಿಯೂರಪ್ಪನವರು ಲಾಕ್ ಡೌನ್ ಸಡಿಲಿಕೆ ನಿರ್ಧಾರದಿಂದ ಹಿಂದೆ ಸರಿದರೆಂದು ಹೇಳಲಾಗಿದೆ.