
ಐಪಿಎಲ್ ತೊರೆದು ಸುರೇಶ್ ರೈನಾ ಭಾರತಕ್ಕೆ ವಾಪಸ್ ಆಗಿದ್ದಾರೆ. ಅವ್ರು ಭಾರತಕ್ಕೆ ಬರ್ತಿದ್ದಂತೆ ಸಾಕಷ್ಟು ಚರ್ಚೆಯಾಗಿದ್ದಾರೆ. ಕೌಟುಂಬಿಕ ಕಾರಣದಿಂದ ಸುರೇಶ್ ರೈನಾ ಭಾರತಕ್ಕೆ ವಾಪಸ್ ಆಗಿದ್ದಾರೆ. ಆದ್ರೆ ಚೆನ್ನೈ ಸೂಪರ್ ಕಿಂಗ್ಸ್ ಮಾಲೀಕ ಶ್ರೀನಿವಾಸನ್ ಇದಕ್ಕೆ ಬೇರೆ ಕಾರಣವನ್ನು ಹೇಳಿದ್ದರು.
ಇಷ್ಟು ದಿನ ಸುಮ್ಮನಿದ್ದ ಸುರೇಶ್ ರೈನಾ ಈಗ ಪ್ರತಿಕ್ರಿಯೆ ನೀಡಿದ್ದಾರೆ. ಕೌಟುಂಬಿಕ ಕಾರಣದಿಂದಾಗಿ ನಾನು ಭಾರತಕ್ಕೆ ವಾಪಸ್ ಆಗಿದ್ದೇನೆಂದು ಸುರೇಶ್ ರೈನಾ ಹೇಳಿದ್ದಾರೆ. ನನಗೆ ಕುಟುಂಬ ಮುಖ್ಯ. ನನಗೆ ಏನಾದ್ರೂ ಆದ್ರೆ ನನ್ನ ಕುಟುಂಬದ ಕಥೆ ಏನು ಎಂದು ಚಿಂತೆ ಮಾಡ್ತೇನೆ. ಕಳೆದ 20 ದಿನಗಳಿಂದ ನಾನು ನನ್ನ ಮಕ್ಕಳನ್ನು ನೋಡಿಲ್ಲ. ಭಾರತಕ್ಕೆ ವಾಪಸ್ ಬಂದಾಗಿನಿಂದಲೂ ಕ್ವಾರಂಟೈನ್ ನಲ್ಲಿದ್ದೇನೆಂದು ಸುರೇಶ್ ರೈನಾ ಹೇಳಿದ್ದಾರೆ.
ನಾನು ಕ್ವಾರಂಟೈನ್ ನಲ್ಲಿದ್ದರೂ ಅಭ್ಯಾಸ ಮಾಡ್ತಿದ್ದೇನೆ. ಎಲ್ಲರನ್ನು ಸುರಕ್ಷಿತವಾಗಿಡಲು ಬಿಸಿಸಿಐ ಮತ್ತು ತಂಡದ ನಿರ್ವಾಹಕರು ಉತ್ತಮ ಕೆಲಸ ಮಾಡ್ತಿದ್ದಾರೆ. ಯಾರೂ ಅನವಶ್ಯಕ ತಿರುಗಾಡುವಂತಿಲ್ಲ. ನಾವೆಲ್ಲ ಕೋಣೆಯಲ್ಲಿಯೇ ಇದ್ದೆವು. ಪ್ರತಿ ದಿನ ಪರೀಕ್ಷೆ ನಡೆಯುತ್ತಿತ್ತು ಎಂದು ಸುರೇಶ್ ರೈನಾ ಹೇಳಿದ್ದಾರೆ.
ಧೋನಿ ಮತ್ತು ನನ್ನ ಮಧ್ಯೆ ಯಾವುದೇ ವಿವಾದವಿಲ್ಲ. ತಂಡದ ಜೊತೆ ಯಾವುದೇ ವಿವಾದವಿಲ್ಲ. ಅನಿವಾರ್ಯ ಕಾರಣಕ್ಕೆ ಐಪಿಎಲ್ ಬಿಟ್ಟು ಬರಬೇಕಾಗಿದೆ. ಸೂಕ್ತ ಕಾರಣವಿಲ್ಲದೆ ಯಾರೂ 12 ಕೋಟಿ ಬಿಡುವುದಿಲ್ಲ. ನಾನು ಅಂತರಾಷ್ಟ್ರೀಯ ಕ್ರಿಕೆಟ್ ಗೆ ವಿದಾಯ ಹೇಳಿದ್ದೇನೆ. ಆದ್ರೆ ಇನ್ನೂ ಐದು ವರ್ಷ ಐಪಿಎಲ್ ಆಡಬಲ್ಲೆ ಎಂದು ರೈನಾ ಹೇಳಿದ್ದಾರೆ.