
ತುಮಕೂರು: ಕುಣಿಗಲ್ ತಾಲೂಕು ಆಸ್ಪತ್ರೆಯಲ್ಲಿ ಅವಿವಾಹಿತ ಯುವತಿ ಜನ್ಮ ನೀಡಿದ ಮಗು ಮಾರಾಟ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕುಣಿಗಲ್ ಪೊಲೀಸರು ಮಗುವಿನ ತಾಯಿ, ಅಂಗನವಾಡಿ ಕಾರ್ಯಕರ್ತೆ ಸೇರಿ ಐವರನ್ನು ಬಂಧಿಸಿದ್ದಾರೆ.
ಅಂಗನವಾಡಿ ಕಾರ್ಯಕರ್ತೆ ಜ್ಯೋತಿ, ಮಗು ಖರೀದಿಸಿದ ಮುಬಾರಕ್ ಪಾಷಾ, ಮಗುವಿನ ತಾಯಿ ಮತ್ತು ಆಕೆಯ ಪ್ರಿಯಕರ ಮಾಗಡಿ ಮೂಲದ ಶ್ರೀನಂದ ಹಾಗೂ ಮಾಗಡಿಯ ಜ್ಯೋತಿ ಬಂಧಿತ ಆರೋಪಿಗಳು.
ರಾಮನಗರ ಜಿಲ್ಲೆ ಮಾಗಡಿಯ 21 ವರ್ಷದ ಅವಿವಾಹಿತೆ ಫೆಬ್ರವರಿ 20ರಂದು ಕುಣಿಗಲ್ ಆಸ್ಪತ್ರೆಯಲ್ಲಿ ಗಂಡು ಮಗುವಿಗೆ ಜನ್ಮ ನೀಡಿದ್ದಾಳೆ. ಆಕೆಯ ಪ್ರಿಯಕರ ಶ್ರೀನಂದ ಆಸ್ಪತ್ರೆಗೆ ದಾಖಲಿಸಿದ್ದ. ಮದುವೆಯಾಗದ ಹಿನ್ನೆಲೆಯಲ್ಲಿ ಮಗುವನ್ನು ಕರೆದುಕೊಂಡು ಹೋಗಲು ಯುವತಿ ನಿರಾಕರಿಸಿದ್ದಳು. ಈ ವೇಳೆ ಮಾಗಡಿಯ ಜ್ಯೋತಿ ಎಂಬಾಕೆ ಕುಣಿಗಲ್ ತಾಲೂಕು ಕೊತ್ತಗೆ ಅಂಗನವಾಡಿ ಕಾರ್ಯಕರ್ತೆ ಜ್ಯೋತಿಯನ್ನು ಸಂಪರ್ಕಿಸಿ ಮಗು ಮಾರಾಟಕ್ಕೆ ಸಹಕರಿಸಿದ್ದಾಳೆ.
ಮುಬಾರಕ್ ಪಾಷಾನನ್ನು ಸಂಪರ್ಕಿಸಿದ್ದು, ಆತ ಫೆಬ್ರವರಿ 22ರಂದು 60 ಸಾವಿರ ರೂಪಾಯಿ ಕೊಟ್ಟು ಮಗು ಖರೀದಿಸಿದ್ದಾನೆ. ನಂತರ ಯುವತಿಯ ಆರೋಗ್ಯದಲ್ಲಿ ವ್ಯತ್ಯಯ ಉಂಟಾಗಿದ್ದು, ಹೆರಿಗೆಯಾಗಿರುವ ವಿಚಾರವನ್ನು ಪೋಷಕರಿಗೆ ತಿಳಿಸಿದ್ದಾಳೆ. ಈ ವೇಳೆ ಪೋಷಕರು ಮಗು ವಾಪಸ್ ಪಡೆಯಲು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.