
ಶಿವಮೊಗ್ಗದಲ್ಲಿ ಫುಡ್ ಆನ್ ವಾಲ್ ಯೋಜನೆಯಡಿಯಲ್ಲಿ 2ನೇ ಹೋಟೆಲ್ ಅನ್ನು ವಿನೋಬನಗರದ ಮೋರ್ ಬಳಿಯ ಸೌಂದರ್ಯ ವೆಜ್ ಹೋಟೆಲ್ನಲ್ಲಿ ಇಂದು ಜಿಲ್ಲಾಧಿಕಾರಿ ಡಾ. ಆರ್. ಸೆಲ್ವಮಣ ಉದ್ಘಾಟಿಸಿದರು.
ಹಸಿದವರಿಗಾಗಿ ಉಚಿತ ಊಟ ನೀಡುವ ಯೋಜನೆಯು ಇದಾಗಿದ್ದು, ವಿವಿಧ ಕೆಲಸ ಕಾರಣಗಳಿಗಾಗಿ ನಗರಕ್ಕೆ ಹಳ್ಳಿಗಳಿಂದ ಬರುವ ಎಷ್ಟೋ ಜನರು ಹಸಿವಿನಿಂದ ಬಳಲುತ್ತಿರುತ್ತಾರೆ. ದೂರದೂರಿನಿಂದ ವಿದ್ಯಾಭ್ಯಾಸಕ್ಕಾಗಿ ಬರುವ ವಿದ್ಯಾರ್ಥಿಗಳು ಕೂಡ ಹಣಕಾಸಿನ ತೊಂದರೆಯಿಂದ ಊಟದಿಂದ ವಂಚಿತರಾಗುತ್ತಾರೆ. ಕೆಲವು ವೃದ್ಧರು ಮನೆಯಲ್ಲಿ ಆಹಾರ ತಯಾರಿಸಲು ಅಸಮರ್ಥರಾಗಿರುತ್ತಾರೆ. ಇಂತಹವರಿಗೆ ಯೂನಿವರ್ಸಲ್ ನಾಲೆಡ್ಜ್ ಸಂಸ್ಥೆಯು ಇ-ಫುಡ್ ಆನ್ ವಾಲ್ ಯೋಜನೆ ಹಮ್ಮಿಕೊಂಡಿದ್ದು, ಹಸಿದವರಿಗೆ ಇದು ಸಹಕಾರಿಯಾಗಿದೆ ಎಂದು ಜಿಲ್ಲಾಧಿಕಾರಿಗಳು ಅಭಿಪ್ರಾಯಪಟ್ಟರು.
ಸೌಂದರ್ಯ ಹೋಟೆಲ್ನಲ್ಲಿ ಪ್ರತಿದಿನ ಮಧ್ಯಾಹ್ನ 12ರಿಂದ ಸಂಜೆ 4ರವರೆಗೆ ಸಂಸ್ಥೆಯ ವತಿಯಿಂದ 15 ಟೋಕನ್ಗಳನ್ನು ಉಚಿತವಾಗಿ ಫುಡ್ ವಾಲ್ಗೆ ಅಂಟಿಸಿದ್ದು, ಊಟ ಬೇಕಾದವರು ಅದನ್ನು ಪಡೆದು ಉಚಿತ ಊಟ ಪಡೆಯಬಹುದಾಗಿದೆ. ರಾಜ್ಯಾದ್ಯಂತ ಈಗಾಗಲೇ ಒಟ್ಟು 11 ಹೋಟೆಲ್ಗಳು ಈ ಯೋಜನೆಯಡಿ ಭಾಗಿಯಾಗಿದ್ದು, ಶಿವಮೊಗ್ಗದಲ್ಲಿ ಈಗಾಗಲೇ ಎರಡು ಪ್ರಾರಂಭವಾಗಿದೆ.
ಯೂನಿವರ್ಸಲ್ ನಾಲೆಡ್ಜ್ ಸಂಸ್ಥೆ ಹಲವು ಮಾನದಂಡಗಳ ಪರಿಶೀಲನೆ ಬಳಿಕ ಹೋಟೆಲ್ಗಳ ಆಯ್ಕೆ ಮಾಡಿ ಈ ಸೌಲಭ್ಯವನ್ನು ಹಸಿದವರಿಗೆ ನೀಡುತ್ತದೆ. ಸಾರ್ವಜನಿಕರು ಕೂಡ ಇದರಲ್ಲಿ ಭಾಗವಹಿಸಬಹುದು. ತಮ್ಮ ಶಕ್ತಾನ್ಯುಸಾರ ಊಟಗಳನ್ನು ಪ್ರಾಯೋಜಿಸುವ ಮೂಲಕ ಹಸಿವುಮುಕ್ತ ಸಮಾಜ ನಿರ್ಮಾಣದಲ್ಲಿ ಭಾಗವಹಿಸಬಹುದಾಗಿದೆ ಎಂದರು.