
19 ಗುಂಟೆ ಜಮೀನಿಗಾಗಿ ಚಿಕ್ಕಪ್ಪ, ತನ್ನ ಅಣ್ಣನ ಮಗನ ಮೇಲೆಯೇ ಕಾರು ಹರಿಸಿ ಹತ್ಯೆಗೈದಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆ ನೆಲಮಂಗಲದ ಮಾಕನಕುಪ್ಪೆ ಗ್ರಾಮದಲ್ಲಿ ನಡೆದಿದೆ.
ರವಿಕುಮಾರ್ (28) ಮೃತ ಯುವಕ. ಸುರೇಶ್ ಕುಮಾರ್ ಅಣ್ಣನ ಮಗನನ್ನೇ ಕೊಂದ ಚಿಕ್ಕಪ್ಪ. 19 ಗುಂಟೆ ಭೂಮಿಗಾಗಿ ಅಣ್ಣ-ತಮ್ಮನ ನಡುವೆ ಜಗಳವಾಗಿತ್ತು. ಹಾಗಾಗಿ ಅಣ್ಣನ ಮಗನನ್ನೇ ಮುಗಿಸಿದರೆ ಜಮೀನು ವಿವಾದ ಅಂತ್ಯವಾಗುತ್ತದೆ ಎಂದು ಪ್ಲಾನ್ ಮಾಡಿ ಅಣ್ಣನ ಮಗ ರವಿಕುಮಾರ್ ಮೇಲೆ ಕಾರು ಹತ್ತಿಸಿದ್ದಾನೆ.
ಗಂಭೀರವಾಗಿ ಗಾಯಗೊಂಡಿದ್ದ ರವಿಕುಮಾರ್ ನನ್ನು ತುಮಕೂರಿನ ಸಿದ್ಧಗಂಗಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೇ ರವಿಕುಮಾರ್ ಸಾವನ್ನಪ್ಪಿದ್ದಾನೆ. ಘಟನೆ ಬಳಿಕ ಚಿಕ್ಕಪ್ಪ ಸುರೇಶ್ ಕುಮಾರ್ ಪರಾರಿಯಾಗಿದ್ದಾನೆ.
ತ್ಯಾಮಗೊಂಡ್ಲು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಆರೋಪಿಗಾಗಿ ಹುಡುಕಾಟ ನಡೆಸಿದ್ದಾರೆ.