
ಬೆಂಗಳೂರು: ಭೂ ಪರಿವರ್ತನೆ ಮಾಡದೆ ನಿರ್ಮಿಸುವ ಅನಧಿಕೃತ ಬಡಾವಣೆಗಳ ಸ್ವತ್ತು ನೋಂದಣಿ ತಡೆಯುವ ವ್ಯವಸ್ಥೆಯನ್ನು ವೆಬ್ಸೈಟ್ ನಲ್ಲಿ ರೂಪಿಸುವಂತೆ ನೋಂದಣಿ ಮಹಾ ಪರಿವೀಕ್ಷಕರು ಮತ್ತು ಮುದ್ರಾಂಕಗಳ ಆಯುಕ್ತ ಕೆ.ಎ. ದಯಾನಂದ ರಾಜ್ಯ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.
ಅನಧಿಕೃತ ಬಡಾವಣೆಗಳಿಗೆ ಕಡಿವಾಣ ಹಾಕುವಂತೆ ಅನೇಕ ಸಭೆಗಳಲ್ಲಿ ಸೂಚನೆ ನೀಡಲಾಗಿದೆ. ಹೀಗಿದ್ದರೂ, ಕೃಷಿ ಜಮೀನಿನಲ್ಲಿ ಅನಧಿಕೃತ ಬಡಾವಣೆ ಹಾವಳಿ ತಡೆಗಟ್ಟದೆ ಉತ್ತೇಜನ ನೀಡುತ್ತಿರುವುದು ಕಂಡು ಬಂದಿದೆ. ಗ್ರಾಮ ಪಂಚಾಯಿತಿ ಸ್ಥಳೀಯ ಸಂಸ್ಥೆಗಳಲ್ಲಿ ನಕಲಿ ದಾಖಲೆಗಳನ್ನು ಸೃಷ್ಟಿಸಿ ಉಪ ನೋಂದಣಾಧಿಕಾರಿಗಳ ಕಚೇರಿಯಲ್ಲಿ ಅಕ್ರಮ ನಕಲಿ ದಾಖಲೆ ಆಧರಿಸಿ ಬಡಾವಣೆ ನೋಂದಣಿ ಮಾಡುತ್ತಿರುವುದು ಹೆಚ್ಚಾಗಿ ಕಂಡುಬಂದಿದೆ.
ಹಾಗಾಗಿ ತಾಲೂಕು ವ್ಯಾಪ್ತಿಗೆ ಒಳಪಡುವ ಹಸಿರು ವಲಯದಲ್ಲಿನ ವಸತಿ, ವಾಣಿಜ್ಯ ಮತ್ತು ಕೈಗಾರಿಕೆ ಉದ್ದೇಶಕ್ಕೆ ಬಳಕೆಯಾದ ಬಡಾವಣೆಗಳನ್ನು ಆದ್ಯತೆ ಮೇಲೆ ಗುರುತಿಸಿ ಪ್ರಕಟಿಸುವಂತೆ ಜಿಲ್ಲಾ ಬೆಂಗಳೂರು ನಗರ ಜಿಲ್ಲಾಧಿಕಾರಿಯೂ ಆಗಿರುವ ಕೆ.ಎ. ದಯಾನಂದ ಅವರು ಪತ್ರ ಬರೆದಿದ್ದಾರೆ.
ಭೂ ಪರಿವರ್ತನೆ ಮಾಡದೆ, ಯೋಜನಾ ಪ್ರಾಧಿಕಾರಗಳಿಂದ ಅನುಮೋದನೆ ಪಡೆಯದೆ ಅಭಿವೃದ್ಧಿಪಡಿಸುವ ಸ್ವತ್ತುಗಳನ್ನು ಉಪ ನೋಂದಣಾಧಿಕಾರಿಗಳ ಕಚೇರಿಯಲ್ಲಿ ನೋಂದಣಿ ಮಾಡಲು ಸಾಧ್ಯವಾಗದಂತೆ ಸಾಫ್ಟ್ವೇರ್ ನಲ್ಲಿಯೇ ವ್ಯವಸ್ಥೆ ರೂಪಿಸಬೇಕೆನ್ನುವ ಮನವಿ ಸರ್ಕಾರದ ಹಂತದಲ್ಲಿದ್ದು, ಇದು ಅನುಷ್ಠಾನಗೊಂಡಲ್ಲಿ ಅನಧಿಕೃತ ಬಡಾವಣೆಗಳಿಗೆ ಕಡಿವಾಣ ಹಾಕಬಹುದಾಗಿದೆ ಎನ್ನಲಾಗಿದೆ.