
ಬೆಂಗಳೂರು: ಸಾರಿಗೆ ನೌಕರರ ಪ್ರತಿಭಟನೆ ತೀವ್ರ ಸ್ವರೂಪ ಪಡೆದುಕೊಂಡಿದ್ದು, ಒಂದೆಡೆ ಪ್ರಯಾಣಿಕರು ಬಸ್ ಸಂಚಾರವಿಲ್ಲದೇ ಪರದಾಡುತ್ತಿದ್ದಾರೆ. ಇನ್ನೊಂದೆಡೆ ಬಸ್ ಚಾಲಕರು ಹಾಗೂ ನಿರ್ವಾಹಕರಿಗೆ ಬಸ್ ಗಳನ್ನು ಬಿಡುವಂತೆ ಮನವಿ ಮಾಡುತ್ತಿದ್ದಾರೆ. ಆದರೆ, ಇದಾವುದಕ್ಕೂ ಬಗ್ಗದ ಸಾರಿಗೆ ನೌಕರರು ಮುಷ್ಕರ ಮುಂದುವರಿಸಿದ್ದಾರೆ.
ಬಸ್ ಇಲ್ಲದೇ ಸಂಕಷ್ಟಕ್ಕೀಡಾಗಿರುವ ಪ್ರಯಾಣಿಕಿರು ಬಸ್ ನಿಲ್ದಾಣದಲ್ಲೇ ನಿಂತು ನಿಂತು ಸುಸ್ತಾಗಿದ್ದಾರೆ. ಈ ನಡುವೆ ಪ್ರಯಾಣಿಕರು ಬಸ್ ಓಡಿಸುವಂತೆ ಸಾರಿಗೆ ನೌಕರರಿಗೆ ಒತ್ತಾಯಿಸಿದ್ದಕ್ಕೆ ರೊಚ್ಚಿಗೆದ್ದ ಸಾರಿಗೆ ಸಿಬ್ಬಂದಿ ಪ್ರಯಾಣಿಕರ ಮೇಲೆಯೇ ಹಲ್ಲೆ ನಡೆಸಿರುವ ಘಟನೆ ನೆಲಮಂಗಲದಲ್ಲಿ ನಡೆದಿದೆ ಎನ್ನಲಾಗಿದೆ.
ಬೆಂಗಳೂರಿನ ಮೆಜೆಸ್ಟಿಕ್, ಯಶವಂತಪುರ, ಶಾಂತಿನಗರ, ಸ್ಯಾಟಲೈಟ್ ಬಸ್ ನಿಲ್ದಾಣಗಳಲ್ಲಿ ಬಸ್ ಸಂಚಾರ ಸಂಪೂರ್ಣ ಸ್ತಬ್ಧಗೊಂದಿದ್ದು, ಬಿಎಂಟಿಸಿ ನೌಕರರು ಡಿಪೋಗಳಲ್ಲೇ ಮುಷ್ಕರ ನಡೆಸುತ್ತಿದ್ದಾರೆ.