
ಟೋಕಿಯೋ ಒಲಿಂಪಿಕ್ಸ್ನಲ್ಲಿ ಕಂಚಿನ ಪದಕ ಗೆದ್ದ ಭಾರತೀಯ ಪುರುಷರ ತಂಡದ ಸದಸ್ಯರಲ್ಲಿ ಒಬ್ಬರಾದ ವಿವೇಕ್ ಸಾಗರ್ ಪ್ರಸಾದ್ರನ್ನು ಮಧ್ಯ ಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಸನ್ಮಾನಿಸಿದ್ದಾರೆ.
ಪದಕ ಗೆದ್ದು ಬಂದ ವಿವೇಕ್ ಸಾಗರ್ ಪ್ರಸಾದ್ ಗೆ ಡಿಎಸ್ಪಿ ಹುದ್ದೆ, ಒಂದು ಕೋಟಿ ರೂಪಾಯಿ ನಗದು ಬಹುಮಾನ ಹಾಗೂ ಮನೆಯೊಂದನ್ನು ಘೋಷಿಸಿದ್ದಾರೆ ಸಿಎಂ ಚೌಹಾಣ್.
ಹೋಶಂಗಾಬಾದ್ ಬಳಿಯ ಇಟಾರ್ಸಿ ನಿವಾಸಿಯಾದ ಪ್ರಸಾದ್, ತಮಗೆ ಬಂದ ಬಹುಮಾನದ ದುಡ್ಡಿನಲ್ಲಿ ಮೊದಲು ತಮ್ಮ ಹೆತ್ತವರಿಗೆ ವಾಸಿಸಲು ಭದ್ರವಾದ ಸೂರು ಕಟ್ಟಲು ಆದ್ಯತೆ ಕೊಡುವುದಾಗಿ ಹೇಳಿದ್ದಾರೆ.
ಶಾಲಾ ಶಿಕ್ಷಕರ ಮಗನಾದ ಪ್ರಸಾದ್, ಬಿಹಾರ ಮೂಲದವರಾಗಿದ್ದು, ವರ್ಷಗಳ ಹಿಂದೆ ಕೆಲಸ ಹುಡುಕಿಕೊಂಡು ಮಧ್ಯ ಪ್ರದೇಶಕ್ಕೆ ಬಂದಿದ್ದರು. ಇನ್ನೂ ಪುಟ್ಟ ಮನೆಯಲ್ಲೇ ವಾಸ ಮಾಡುವ ಪ್ರಸಾದ್ ಕುಟುಂಬದ ಪಾಡನ್ನು ಮಾಧ್ಯಮಗಳಲ್ಲಿ ತೋರಿಸಲಾಗಿತ್ತು.
ಆ.15 ರಿಂದ ಮತ್ತಷ್ಟು ತೆರೆದುಕೊಳ್ಳಲಿದೆ ಮಹಾರಾಷ್ಟ್ರ
ಮಧ್ಯ ಪ್ರದೇಶದ ಪೊಲೀಸ್ ಇಲಾಖೆಯಲ್ಲಿ ಡಿಎಸ್ಪಿ ಆಗಿ ನೇಮಕ ಮಾಡಿಕೊಳ್ಳುವುದಾಗಿ ಘೋಷಿಸಿದ ಶಿವರಾಜ್ ಸಿಂಗ್ ಚೌಹಾಣ್, ಪ್ರಸಾದ್ ಹೆತ್ತವರಿಗೆ ತಮ್ಮ ರಾಜ್ಯದಲ್ಲಿ ಯಾವ ಜಾಗದಲ್ಲಿ ಬೇಕೋ ಆ ಜಾಗದಲ್ಲಿ ಮನೆ ಕೊಡಿಸುವುದಾಗಿ ತಿಳಿಸಿದ್ದಾರೆ.
ಇದೇ ವೇಳೆ, ಮಧ್ಯ ಪ್ರದೇಶ ಹಾಕಿ ಅಕಾಡೆಮಿಯ ಮಾಜಿ ತಾಂತ್ರಿಕ ಸಲಹೆಗಾರರಾಗಿದ್ದ ಪ್ರಸಾದ್ರ ಕೋಚ್ ಅಶೋಕ್ ಕುಮಾರ್ರನ್ನೂ ಸಹ ಸನ್ಮಾನಿಸಲಾಗಿದೆ. ಅಶೋಕ್ ಕುಮಾರ್ ಅವರು ಹಾಕಿ ದಂತಕಥೆ ಮೇಜರ್ ಧ್ಯಾನ್ ಚಂದ್ ಪುತ್ರರಾಗಿದ್ದಾರೆ.
ಪುರುಷರ ಹಾಕಿ ತಂಡದ ಸಹಾಯಕ ಕೋಚ್ ಆಗಿರುವ ರಾಜ್ಯದ ನಿವಾಸಿ ಶಿವೇಂದ್ರ ಕುಮಾರ್ರನ್ನು ಸಹ ಈ ವೇಳೆ ಸನ್ಮಾನಿಸಿ 25 ಲಕ್ಷ ರೂ. ನಗದು ಬಹುಮಾನ ನೀಡಲಾಯಿತು.