90ರ ದಶಕದ ಖ್ಯಾತ ಬಾಲಿವುಡ್ ನಟ ಮಹೇಶ್ ಆನಂದ್ ಅವರ ಬದುಕು ಹಾಗೂ ಸಾವು ದುರಂತಮಯವಾಗಿತ್ತು. ಖಳನಾಯಕ ಪಾತ್ರಗಳ ಮೂಲಕ ಪ್ರೇಕ್ಷಕರ ಮನ ಗೆದ್ದಿದ್ದ ಮಹೇಶ್ ಆನಂದ್, ತಮ್ಮ ವೃತ್ತಿ ಜೀವನದ ಉತ್ತುಂಗದಲ್ಲಿದ್ದಾಗ ಅಪಾರ ಯಶಸ್ಸು ಕಂಡರು. ಆದರೆ, ಅವರ ಬದುಕಿನ ಕೊನೆಯ ದಿನಗಳು ನೋವಿನಿಂದ ಕೂಡಿದ್ದವು.
80 ಮತ್ತು 90ರ ದಶಕದಲ್ಲಿ ತಮ್ಮ ಅದ್ಭುತ ನಟನೆಯಿಂದ ಪ್ರೇಕ್ಷಕರನ್ನು ರಂಜಿಸಿದ್ದ ಮಹೇಶ್ ಆನಂದ್, ನಂತರದಲ್ಲಿ ಚಿತ್ರರಂಗದಿಂದ ದೂರ ಸರಿದರು. ಅವರ ಸ್ಥಿತಿ ಎಷ್ಟು ಶೋಚನೀಯವಾಗಿತ್ತೆಂದರೆ, ಅವರ ಸಾವಿನ ಸುದ್ದಿ ಅನೇಕರಿಗೆ ತಿಳಿಯಲೇ ಇಲ್ಲ.
ತಮ್ಮ ಜೀವನದ ಕೊನೆಯ 18 ವರ್ಷಗಳನ್ನು ಬಡತನದಲ್ಲಿ ಕಳೆದ ಮಹೇಶ್ ಆನಂದ್, ಒಂಟಿತನದಿಂದ ನರಳಿದರು. “ನನ್ನ ಸ್ನೇಹಿತರು ಹಾಗೂ ಎಲ್ಲರೂ ನನ್ನನ್ನು ಕುಡುಕ ಎನ್ನುತ್ತಾರೆ. ನನಗೆ ಕುಟುಂಬವಿಲ್ಲ. ನನ್ನ ಮಲಸಹೋದರ ನನಗೆ 6 ಕೋಟಿ ರೂಪಾಯಿಗಳನ್ನು ವಂಚಿಸಿದ್ದಾನೆ. ನಾನು 300ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದೇನೆ, ಆದರೆ ನನಗೆ ಕುಡಿಯುವ ನೀರನ್ನು ಕೊಳ್ಳಲೂ ಹಣವಿಲ್ಲ. ಈ ಜಗತ್ತಿನಲ್ಲಿ ನನಗೆ ಒಬ್ಬನೇ ಒಬ್ಬ ಸ್ನೇಹಿತನಿಲ್ಲ, ಇದು ತುಂಬಾ ದುಃಖಕರವಾಗಿದೆ” ಎಂದು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಮಹೇಶ್ ಆನಂದ್ ಬರೆದುಕೊಂಡಿದ್ದರು.
ತಮ್ಮ ಮಗ ತ್ರಿಶೂಲ್ನನ್ನು ನೆನೆದು ಅನೇಕ ಬಾರಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದ ಮಹೇಶ್ ಆನಂದ್, “ನನ್ನ ಮಗ ತ್ರಿಶೂಲ್……. ದೇವರು ನಿನಗೆ ಒಳ್ಳೆಯದು ಮಾಡಲಿ, ನನ್ನ ಮಗ…… ನಾನು ಸಾಯುವ ಮೊದಲು ಒಮ್ಮೆ ನನ್ನನ್ನು ತಬ್ಬಿಕೋ. ನಿನ್ನನ್ನು ಜೀವನಪರ್ಯಂತ ಪ್ರೀತಿಸುತ್ತೇನೆ” ಎಂದು ಬರೆದಿದ್ದರು.
“ಕರಿಷ್ಮಾ” ಚಿತ್ರದ ಮೂಲಕ ತಮ್ಮ ವೃತ್ತಿ ಜೀವನ ಆರಂಭಿಸಿದ ಮಹೇಶ್ ಆನಂದ್, ಹಿಂದಿ, ತಮಿಳು, ತೆಲುಗು ಮತ್ತು ಮಲಯಾಳಂ ಭಾಷೆಗಳ ಅನೇಕ ಚಿತ್ರಗಳಲ್ಲಿ ನಟಿಸಿದ್ದರು. 2019ರಲ್ಲಿ ತೆರೆಕಂಡ “ರಂಗೀಲಾ ರಾಜಾ” ಚಿತ್ರದಲ್ಲಿ ಕೊನೆಯ ಬಾರಿಗೆ ಕಾಣಿಸಿಕೊಂಡರು.
2019ರ ಫೆಬ್ರವರಿಯಲ್ಲಿ ಮಹೇಶ್ ಆನಂದ್ ತಮ್ಮ ಮನೆಯಲ್ಲಿ ಶೋಚನೀಯ ಸ್ಥಿತಿಯಲ್ಲಿ ಸಾವನ್ನಪ್ಪಿದ್ದರು. ಅವರ ಮನೆಗೆಲಸದವರು ಎಷ್ಟೇ ಪ್ರಯತ್ನಿಸಿದರೂ ಅವರು ಬಾಗಿಲು ತೆರೆಯದ ಕಾರಣ, ನೆರೆಹೊರೆಯವರಿಗೆ ವಿಷಯ ತಿಳಿಸಿದರು. ಅವರು ಬಂದು ನೋಡಿದಾಗ, ಮಹೇಶ್ ಆನಂದ್ ಸೋಫಾದ ಮೇಲೆ ಕುಳಿತ ಸ್ಥಿತಿಯಲ್ಲಿ ಸಾವನ್ನಪ್ಪಿದ್ದರು. ಅವರ ಮುಂದೆ ಮದ್ಯದ ಬಾಟಲ್ ಮತ್ತು ಊಟದ ತಟ್ಟೆ ಇತ್ತು.