
ಆರ್ಮೂರ್: ತೆಲಂಗಾಣ ಚುನಾವಣಾ ಪ್ರಚಾರದ ವೇಳೆ ಅವಘಡವೊಂದು ಸಂಭವಿಸಿದೆ. ಮುಖ್ಯಮಂತ್ರಿ ಚಂದ್ರಶೇಖರ್ ರಾವ್ ಅವರ ಪುತ್ರ, ಸಚಿವ ಕೆ.ಟಿ.ರಾಮರಾವ್ ಚುನಾವಣಾ ಪ್ರಚಾರದ ವಾಹನದಿಂದ ಕೆಳಗೆ ಬಿದ್ದ ಘಟನೆ ನಡೆದಿದೆ.
ತೆಲಂಗಾಣದ ಆರ್ಮೂರು ಪ್ರದೇಶದಲ್ಲಿ ಈ ಘಟನೆ ನಡೆದಿದೆ. ನಿಜಾಮಾಬಾದ್ ಜಿಲ್ಲೆಯ ಆರ್ಮೂರು ಕ್ಷೇತ್ರದಲ್ಲಿ ಬಿಆರ್ ಎಸ್ ಅಭ್ಯರ್ಥಿ ಜೀವನ್ ರೆಡ್ಡಿ ನಾಮಪತ್ರ ಸಲ್ಲಿಕೆ ವೇಳೆ ಮೆರವಣಿಗೆ ಮೂಲಕ ವಾಹನದಲ್ಲಿ ಸಾಗುತ್ತಿದ್ದ ವೇಳೆ ಈ ಅವಘಡ ನಡೆದಿದೆ.
ಜೀವನ್ ರೆಡ್ಡಿ ಪರ ಸಚಿವ ಕೆ.ಟಿ.ರಾಮರಾವ್ ಪ್ರಚಾರ ನಡೆಸುತ್ತಾ ಮೆರವಣಿಗೆ ವಾಹನದಲ್ಲಿ ನಿಂತು ಸಾಗುತ್ತಿದ್ದರು. ಈ ವೇಳೆ ಪ್ರಚಾರ ವಾಹನ ಚಾಲಕ ಏಕಾಏಕಿ ಬ್ರೇಕ್ ಹಾಕುತ್ತಿದ್ದಂತೆ ವಾಹನದ ಮೇಲಿದ್ದ ಸಚಿವರು, ಜೀವನ್ ರೆಡ್ಡಿ ಹಾಗೂ ಇನ್ನಿತರರು ಮುಗ್ಗರಿಸಿ ಬಿದ್ದಿದ್ದಾರೆ. ಸಚಿವರು ಸಾವರಿಸಿಕೊಂಡು ಮೇಲೆದ್ದಿದ್ದಾರೆ. ಕೆಲವರು ಗಾಯಗೊಂಡಿದ್ದಾರೆ.
ಅದೃಷ್ಟವಶಾತ್ ಹೆಚ್ಚಿನ ಅನಾಹುತ ಸಂಭವಿಸಿಲ್ಲ. ಚುನಾವಣಾ ಪ್ರಚಾರ ಕಾರ್ಯದ ವೇಳೆ ಈ ಘಟನೆ ನಡೆದಿದೆ.