ಕುಡಿದ ಮತ್ತಿನಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ಪ್ರತಿಮೆ ಬಳಿ ಮೂತ್ರ ವಿಸರ್ಜನೆ ಮಾಡಿದ ಆರೋಪಕ್ಕೆ ಸಿಟ್ಟಿಗೆದ್ದ ಗುಂಪು ವ್ಯಕ್ತಿಯೊಬ್ಬನನ್ನು ಥಳಿಸಿ ಅರೆಬೆತ್ತಲೆ ಮೆರವಣಿಗೆ ಮಾಡಿದೆ. ತೆಲಂಗಾಣದ ಸಿದ್ದಿಪೇಟ್ ಜಿಲ್ಲೆಯ ಗಜ್ವಾಲ್ ಪಟ್ಟಣದಲ್ಲಿ ಘಟನೆ ನಡೆದಿದೆ.
ಪ್ರತಿಮೆ ಬಳಿ ಮೂತ್ರ ವಿಸರ್ಜನೆ ಮಾಡಿದ ಕುಡುಕನ ಮೇಲೆ ಹಲ್ಲೆ ನಡೆಸಿ ಜೈ ಶ್ರೀ ರಾಮ್ ಘೋಷಣೆ ಕೂಗುತ್ತಾ ಮೆರವಣಿಗೆ ನಡೆಸಿದೆ. ಸ್ಥಳೀಯ ಹಿಂದೂ ಗುಂಪು, ಮದ್ಯದ ಅಮಲಿನಲ್ಲಿದ್ದ ವ್ಯಕ್ತಿ ಮೂತ್ರ ವಿಸರ್ಜಿಸುತ್ತಿರುವುದನ್ನು ನೋಡಿ ಸಿಟ್ಟಿಗೆದ್ದು ಆತನ ಮೇಲೆ ಹಲ್ಲೆ ನಡೆಸಿ ಕ್ಷಮೆ ಕೇಳುವಂತೆ ಒತ್ತಾಯಿಸಿದೆ. ಸೋಮವಾರ ರಾತ್ರಿ ಮುಖ್ಯಮಂತ್ರಿ ಕೆ. ಚಂದ್ರಶೇಖರ ರಾವ್ ಅವರ ಕ್ಷೇತ್ರದಲ್ಲಿ ಈ ಘಟನೆ ನಡೆದಿದೆ.
ಆನ್ಲೈನ್ನಲ್ಲಿ ಕಾಣಿಸಿಕೊಂಡ ಘಟನೆಯ ದೃಶ್ಯಗಳಲ್ಲಿ ಉದ್ರಿಕ್ತ ಜನ ಆ ವ್ಯಕ್ತಿಯನ್ನು ನೀರಿನಿಂದ ಸ್ಥಳವನ್ನು ಸ್ವಚ್ಛಗೊಳಿಸುವಂತೆ ಒತ್ತಾಯಿಸುವುದು, ಒದೆಯುವುದು, ಅರೆಬೆತ್ತಲಾಗಿ ಮೆರವಣಿಗೆ ನಡೆಸುವುದು ಮತ್ತು “ಜೈ ಶ್ರೀ ರಾಮ್” ಎಂದು ಜಪಿಸುವಂತೆ ಒತ್ತಾಯಿಸುವುದನ್ನು ತೋರಿಸುತ್ತದೆ.
ಈ ವೇಳೆ ಗಲಾಟೆ ನಿಯಂತ್ರಣಕ್ಕೆ ಮಧ್ಯಪ್ರವೇಶಿಸಿದ ಓರ್ವ ಪೊಲೀಸ್ ಕೂಡ ಮೂಕ ಪ್ರೇಕ್ಷಕರಾಗಿ ಸುಮ್ಮನೆ ಇರಬೇಕಾದಂತಹ ಪರಿಸ್ಥಿತಿ ನಿರ್ಮಾಣವಾಯಿತು. ಗಲಾಟೆ ವೇಳೆ ಜನಸಮೂಹವು “ಜೈ ಶ್ರೀ ರಾಮ್”, “ಭಾರತ್ ಮಾತಾ ಕಿ ಜೈ” ಮತ್ತು “ಛತ್ರಪತಿ ಶಿವಾಜಿ ಕೀ ಜೈ” ಎಂದು ಘೋಷಣೆಗಳನ್ನು ಕೂಗಿತ್ತು.
ಘಟನೆಯಿಂದ ಪೊಲೀಸರು ಗಸ್ತು ಹೆಚ್ಚಿಸಿದ್ದು ಕಟ್ಟೆಚ್ಚರ ವಹಿಸಿದ್ದಾರೆ. ಮೂತ್ರ ವಿಸರ್ಜನೆ ಮಾಡಿದ ವ್ಯಕ್ತಿಯನ್ನು ಬಂಧಿಸಿ ಕಸ್ಟಡಿಗೆ ನೀಡಲಾಗಿದೆ. ಆತನ ಮೇಲೆ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 294, 295ಎ ಮತ್ತು 504 ರಡಿ ದೂರು ದಾಖಲಾಗಿದೆ.
ಮೂತ್ರ ವಿಸರ್ಜಿಸಿದ ವ್ಯಕ್ತಿಯನ್ನು ಮೆರವಣಿಗೆ ಮಾಡಿದ ಗುಂಪಿನ ನೇತೃತ್ವ ವಹಿಸಿದ್ದವರ ವಿರುದ್ಧವೂ ವಿಡಿಯೋ ಸಾಕ್ಷ್ಯಾಧಾರಗಳ ಆಧಾರದ ಮೇಲೆ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.