ಮಧ್ಯಪ್ರದೇಶದ ಬೆತುಲ್ ಜಿಲ್ಲೆಯ ಶಾಲೆಯೊಂದರಲ್ಲಿ ಶಿಕ್ಷಕಿಯೊಬ್ಬರು ವಿದ್ಯಾರ್ಥಿಗಳಿಗೆ ನಕಲು ಮಾಡಲು ಸಹಾಯ ಮಾಡುತ್ತಿದ್ದ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ಫೆಬ್ರವರಿ 25 ರಂದು ನಡೆದ ಈ ಘಟನೆಯನ್ನು ಯಾರೋ ಒಬ್ಬರು ರೆಕಾರ್ಡ್ ಮಾಡಿ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ.
ಪ್ರಾಥಮಿಕ ಶಾಲಾ ಶಿಕ್ಷಕಿ ಸಂಗೀತಾ ವಿಶ್ವಕರ್ಮ ಅವರು ಗಣಿತ ಪ್ರಶ್ನೆಪತ್ರಿಕೆಯ ಉತ್ತರಗಳನ್ನುಬೋರ್ಡ್ ಮೇಲೆ ಬರೆದು ವಿದ್ಯಾರ್ಥಿಗಳಿಗೆ ನಕಲು ಮಾಡಲು ಅನುಕೂಲ ಮಾಡಿಕೊಡುತ್ತಿದ್ದರು. ವಿಡಿಯೋ ವೈರಲ್ ಆಗುತ್ತಿದ್ದಂತೆ ಜಿಲ್ಲಾಡಳಿತ ತಕ್ಷಣ ಗಮನ ಹರಿಸಿದೆ. ಬೆತುಲ್ ಕಲೆಕ್ಟರ್ ನರೇಂದ್ರ ಕುಮಾರ್ ಸೂರ್ಯವಂಶಿ ಅವರು ವಿಷಯದ ಗಂಭೀರತೆಯನ್ನು ಪರಿಗಣಿಸಿ ತುರ್ತು ತನಿಖೆಗೆ ಆದೇಶಿಸಿದರು.
ತನಿಖೆಯ ಸಮಯದಲ್ಲಿ, ಶಿಕ್ಷಕಿಯ ವಿರುದ್ಧ ನಕಲು ಮಾಡಲು ಸಹಾಯ ಮಾಡಿದ ಆರೋಪಗಳು ನಿಜವೆಂದು ಕಂಡುಬಂದಿದ್ದು, ಇದರಿಂದ ಆಕೆಯನ್ನು ಅಮಾನತುಗೊಳಿಸಲಾಗಿದೆ. ಬುಡಕಟ್ಟು ವ್ಯವಹಾರಗಳ ಇಲಾಖೆಯ ಸಹಾಯಕ ಆಯುಕ್ತೆ ಶಿಲ್ಪಾ ಜೈನ್, ಸಂಗೀತಾ ವಿಶ್ವಕರ್ಮ ಅವರನ್ನು ಪರೀಕ್ಷಾ ಕೊಠಡಿಯಲ್ಲಿ ಮೇಲ್ವಿಚಾರಕರಾಗಿ ನೇಮಿಸಲಾಗಿತ್ತು. ಆದರೆ, ಅವರು ಪ್ರಶ್ನೆಪತ್ರಿಕೆಯ ಉತ್ತರಗಳನ್ನು ಬೋರ್ಡ್ ಮೇಲೆ ಬರೆದು ವಿದ್ಯಾರ್ಥಿಗಳಲ್ಲಿ ನಕಲು ಮಾಡಲು ಅನುಕೂಲ ಮಾಡಿಕೊಡುವ ಮೂಲಕ ತಮ್ಮ ಸ್ಥಾನವನ್ನು ದುರುಪಯೋಗಪಡಿಸಿಕೊಂಡಿದ್ದಾರೆ ಎಂದು ಹೇಳಿದರು.
ಆಕೆಯ ಅಮಾನತು ನಂತರ, ಶಿಕ್ಷಕಿಯ ವಿರುದ್ಧ ವಿಚಾರಣೆಯನ್ನು ಪ್ರಾರಂಭಿಸಲಾಗಿದೆ. ಮತ್ತಷ್ಟು ಗಂಭೀರ ಆರೋಪಗಳು ಸಾಬೀತಾದರೆ, ಆಕೆಯ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬಹುದು ಎಂದು ಜೈನ್ ಹೇಳಿದ್ದು, ಹೆಚ್ಚುವರಿಯಾಗಿ, ಪರೀಕ್ಷಾ ಕೇಂದ್ರದ ಮುಖ್ಯಸ್ಥ ಮತ್ತು ಸಹಾಯಕ ಕೇಂದ್ರದ ಮುಖ್ಯಸ್ಥರ ವಿರುದ್ಧ ಕ್ರಮವನ್ನು ಪರಿಗಣಿಸಲಾಗುತ್ತಿದೆ. ಅಗತ್ಯವಿದ್ದರೆ, ತನಿಖೆಯ ನಂತರ ಎಫ್ಐಆರ್ ಅನ್ನು ಸಹ ದಾಖಲಿಸಬಹುದು ಎಂದಿದ್ದಾರೆ.