
ಚೆನ್ನೈ: ಹಳೆ ಪಿಂಚಣಿ ವ್ಯವಸ್ಥೆ(ಒಪಿಎಸ್) ಮರು ಜಾರಿ ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ತಮಿಳುನಾಡಿನಲ್ಲಿ ಶಿಕ್ಷಕರು ಸೇರಿದಂತೆ ಸಾವಿರಾರು ಸರ್ಕಾರಿ ನೌಕರರು ಮಂಗಳವಾರ ಸಾಂದರ್ಭಿಕ ರಜೆ ಹಾಕಿ ಕರ್ತವ್ಯದಿಂದ ದೂರ ಉಳಿದಿದ್ದಾರೆ.
ಆಡಳಿತಾರೂಢ ಡಿಎಂಕೆ ಪಕ್ಷ ಚುನಾವಣೆಯ ಸಂದರ್ಭದಲ್ಲಿ ನೀಡಿದ ಭರವಸೆಯಂತೆ ಹಳೆ ಪಿಂಚಣಿ ಯೋಜನೆ ಮರು ಜಾರಿಗೊಳಿಸಬೇಕೆಂದು ನೌಕರರು ಒತ್ತಾಯಿಸಿದ್ದಾರೆ. ನೌಕರರ ಹೋರಾಟದಿಂದಾಗಿ ವರ್ಷದಲ್ಲಿ ವಿಧಾನಸಭೆ ಚುನಾವಣೆ ಎದುರಾಗಿರುವ ತಮಿಳುನಾಡು ಸರ್ಕಾರಕ್ಕೆ ಸಂಕಷ್ಟ ಎದುರಾಗಿದೆ.
ಯಾವುದೇ ರೀತಿಯ ಆಂದೋಲನ ನಡೆಸದಂತೆ ಮದ್ರಾಸ್ ಸೈಕೋರ್ಟ್ ನಿರ್ದೇಶನ ನೀಡಿದ್ದರಿಂದ ತಮಿಳುನಾಡಿನ ಸರ್ಕಾರಿ ಶಿಕ್ಷಕರ ಸಂಘಟನೆಗಳ ಜಂಟಿ ಕ್ರಿಯಾ ಸಮಿತಿ ಮೌನ ಪ್ರತಿಭಟನೆ ನಡೆಸಿದೆ. ನಾಲ್ವರು ಸಚಿವರನ್ನು ಒಳಗೊಂಡ ಸಮಿತಿಯ ಜೊತೆಗೆ ಸೋಮವಾರ ರಾತ್ರಿಯವರೆಗೂ ನಡೆಸಲಾದ ಸಭೆ ಫಲಪ್ರದವಾಗದ ಹಿನ್ನೆಲೆಯಲ್ಲಿ ನೌಕರರು ಸಾಮೂಹಿಕ ರಜೆ ಹಾಕಿ ಕರ್ತವ್ಯದಿಂದ ದೂರ ಉಳಿದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ರಾಜ್ಯಾದ್ಯಂತ ತಮ್ಮ ಕಚೇರಿಗಳ ಮುಂದೆ ಪ್ರತಿಭಟನೆ ನಡೆಸಿ ಒಪಿಎಸ್ ಜಾರಿಗೆ ಮತ್ತು ನೌಕರರ ವೇತನಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ಶೀಘ್ರವೇ ಪರಿಹರಿಸಬೇಕೆಂದು ಒತ್ತಾಯಿಸಿದ್ದಾರೆ.