
ಮಂಡ್ಯ: ಮಂಡ್ಯ ಜಿಲ್ಲೆಯಲ್ಲೊಂದು ಮನಕಲಕುವ ಘಟನೆ ನಡೆದಿದೆ. ಪ್ರೀತಿಸಿದ ಯುವಕ ಕೈಕೊಟ್ಟಿದ್ದಕ್ಕೆ ಪುತ್ರಿ ಆತ್ಮಹತ್ಯೆ ಮಾಡಿಕೊಂಡ ಹಿನ್ನೆಲೆಯಲ್ಲಿ ಮನನೊಂದು ತಾಯಿಗೆ ನೇಣಿಗೆ ಶರಣಾಗಿದ್ದಾರೆ.
ಮಂಡ್ಯ ತಾಲೂಕಿನ ಹೆಬ್ಬಕವಾಡಿ ಗ್ರಾಮದಲ್ಲಿ ಘಟನೆ ನಡೆದಿದೆ. ಮನೆಯಲ್ಲಿ ತಾಯಿ ಲಕ್ಷ್ಮಿ(50) ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 25 ದಿನಗಳ ಹಿಂದೆ ಅವರ ಪುತ್ರಿ ವಿಜಯಲಕ್ಷ್ಮಿ(21) ರೈಲಿಗೆ ತಲೆ ಕೊಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದರು.
ಫೆಬ್ರವರಿ 21ರಂದು ಆತ್ಮಹತ್ಯೆ ಮಾಡಿಕೊಂಡಿದ್ದ ವಿಜಯಲಕ್ಷ್ಮಿ ಅವರು ಪಕ್ಕದ ಮಾರಸಿಂಗನಹಳ್ಳಿ ನಿವಾಸಿ ಹರಿಕೃಷ್ಣ ಅವರನ್ನು ಒಂದೂವರೆ ವರ್ಷದಿಂದ ಪರಸ್ಪರ ಪ್ರೀತಿಸುತ್ತಿದ್ದರು. ಆತ ಮೋಸ ಮಾಡಿದ್ದಾನೆ ಎಂಬ ಆರೋಪ ಕೇಳಿ ಬಂದಿದೆ. ಇತ್ತೀಚೆಗೆ ಬೇರೆ ಹುಡುಗಿಯರ ಜೊತೆಗೆ ಹರಿಕೃಷ್ಣ ಸಂಪರ್ಕದಲ್ಲಿದ್ದ. ಈ ಬಗ್ಗೆ ಪ್ರಶ್ನಿಸಿ ವಿಜಯಲಕ್ಷ್ಮಿ ಮದುವೆಗೆ ಪಟ್ಟು ಹಿಡಿದಿದ್ದಳು. ಮದುವೆಗೆ ನಿರಾಕರಿಸಿ ಅವಾಚ್ಯ ಶಬ್ದಗಳಿಂದ ಹರಿಕೃಷ್ಣ ನಿಂದಿಸಿದ್ದ. ಇದರಿಂದ ಮನನೊಂದು ಮಂಡ್ಯದಲ್ಲಿ ವಿಜಯಲಕ್ಷ್ಮಿ ರೈಲಿಗೆ ತಲೆ ಕೊಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದರು.
ಮಂಡ್ಯ ಗ್ರಾಮಾಂತರ ಠಾಣೆಗೆ ವಿಜಯಲಕ್ಷ್ಮಿ ತಂದೆ ದೂರು ನೀಡಿದ್ದರು. ನ್ಯಾಯ ಕೇಳಲು ಹೋಗಿದ್ದವರ ವಿರುದ್ಧವೇ ಪೊಲೀಸರು ದಾಖಲಿಸಿದ್ದರು ಎನ್ನಲಾಗಿದೆ.
ಮಗಳ ಸಾವಿಗೆ ನ್ಯಾಯ ಸಿಕ್ಕಿಲ್ಲವೆಂದು ನೊಂದು ತಾಯಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಲಕ್ಷ್ಮಿ ಅವರ ಶವ ಸಾಗಿಸಲು ಬಿಡದೆ ಕುಟುಂಬದವರು, ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮಂಡ್ಯ ಗ್ರಾಮಾಂತರ ಪೊಲೀಸರ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಆರೋಪಿ ಹರಿಕೃಷ್ಣ ಮತ್ತು ಕುಟುಂಬದವರನ್ನು ಬಂಧಿಸುವಂತೆ ಒತ್ತಾಯಿಸಿದ್ದಾರೆ. ಮಂಡ್ಯ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.