
ಬೆಂಗಳೂರು: ನಕಲಿ ಔಷಧ ತಯಾರಿಕೆ, ಮಾರಾಟ ಮೊದಲಾದ ಪ್ರಕರಣಗಳ ವಿಚಾರಣೆಗೆ ವಿಶೇಷ ಕೋರ್ಟ್ ಸ್ಥಾಪನೆಗೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ.
ವಿಧಾನ ಪರಿಷತ್ ನಲ್ಲಿ ಕಾಂಗ್ರೆಸ್ ಸದಸ್ಯ ಎಸ್. ರವಿ ಅವರ ಪ್ರಶ್ನೆಗೆ ಉತ್ತರ ನೀಡಿದ ಸಚಿವರು, ನಕಲಿ ಔಷಧಗಳ ತಯಾರಿಕೆ, ಮಾರಾಟ ಪ್ರಕರಣಗಳು ನ್ಯಾಯಾಲಯದಲ್ಲಿ ತಡವಾಗಿ ಇತ್ಯರ್ಥವಾಗುತ್ತಿವೆ. ಹೀಗಾಗಿ ವಿಶೇಷ ಕೋರ್ಟ್ ಸ್ಥಾಪನೆಗೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಹೇಳಿದ್ದಾರೆ.
ನಕಲಿ ಔಷಧಗಳ ಜಾಲದಲ್ಲಿ ಇರುವವರಿಗೆ ಕಠಿಣ ಶಿಕ್ಷೆಯಾಗಬೇಕು. ದಂಡ ಕಟ್ಟುವ ಇಲ್ಲವೇ ತಯಾರಿಕಾ ಘಟಕ ಮುಚ್ಚುವ ಹಂತಕ್ಕೆ ಹೋದಾಗ ಮಾತ್ರ ಇವುಗಳನ್ನು ತಡೆಯಲು ಸಾಧ್ಯ. ನಕಲಿ ಔಷಧ ಕಂಡುಬಂದಲ್ಲಿ ಮಾರುಕಟ್ಟೆಯಿಂದ ಹಿಂಪಡೆಯುವ ನೀತಿ ಜಾರಿಗೆ ತರಲು ಉದ್ದೇಶಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.