
ಪಾಪಿ ತಾಯಿಯೊಬ್ಬಳು ತನ್ನ ಅನೈತಿಕ ಸಂಬಂಧಕ್ಕೆ ಅಡ್ಡಿಯಾಗುತ್ತದೆ ಎಂಬ ಕಾರಣಕ್ಕೆ ಹೆತ್ತ ಕಂದಮ್ಮನನ್ನೇ ಹೊಳೆಗೆ ಎಸೆದು ಹತ್ಯೆಗೈದಿದ್ದಾಳೆ. ಇಂತಹದೊಂದು ಆಘಾತಕಾರಿ ಘಟನೆ ಚನ್ನಪಟ್ಟಣ ತಾಲೂಕಿನ ಬಾಣಗಹಳ್ಳಿಯಲ್ಲಿ ನಡೆದಿದ್ದು, ಪೊಲೀಸರು ಈಗ ಆರೋಪಿಯನ್ನು ಬಂಧಿಸಿ ವಿಚಾರಣೆ ನಡೆಸಿದ್ದಾರೆ.
22 ವರ್ಷದ ಭಾಗ್ಯ, ತನ್ನ ಒಂದೂವರೆ ವರ್ಷದ ಗಂಡು ಮಗುವನ್ನು ಕಣ್ವ ಹೊಳೆಗೆ ಎಸೆದು ಕೊಲೆ ಮಾಡಿದ್ದು, ಪತಿ ಶ್ರೀನಿವಾಸ್ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡಿದ್ದ ಅಕ್ಕೂರು ಠಾಣೆ ಪೊಲೀಸರು ಭಾಗ್ಯಳನ್ನು ವಶಕ್ಕೆ ಪಡೆದಿದ್ದಾರೆ.
ನಾಲ್ಕು ವರ್ಷಗಳ ಹಿಂದೆ ವೆಂಕಟೇಶ್ ಎಂಬಾತನ ಜೊತೆ ಮದುವೆಯಾಗಿದ್ದ ಭಾಗ್ಯ, ವರ್ಷದೊಳಗೆ ಆತನನ್ನು ತೊರೆದು ಶ್ರೀನಿವಾಸ್ ಜೊತೆ ಮರು ಮದುವೆಯಾಗಿದ್ದಳು. ಇವರಿಬ್ಬರಿಗೆ ಜನಿಸಿದ ಒಂದೂವರೆ ವರ್ಷದ ಮಗು ದೇವರಾಜು ಈಗ ಕೊಲೆಯಾಗಿದ್ದಾನೆ.
ಮಗು ಇದ್ದರೂ ಸಹ ಇಂತಹ ವರ್ತನೆ ತೋರುತ್ತಿರುವುದಕ್ಕೆ ಆಕೆಯ ತಾಯಿ ಸಹ ಬುದ್ದಿವಾದ ಹೇಳಿದ್ದರು ಎನ್ನಲಾಗಿದೆ. ತನ್ನ ಅನೈತಿಕ ಸಂಬಂಧಕ್ಕೆ ಮಗು ಅಡ್ಡಿಯಾಗುತ್ತದೆ ಎಂಬ ಕಾರಣಕ್ಕೆ ಭಾಗ್ಯ ಇಂತಹ ಘೋರ ಕೃತ್ಯವೆಸಗಿದ್ದು ಇದೀಗ ಪೊಲೀಸರಿಂದ ಬಂಧನಕ್ಕೆ ಒಳಗಾಗಿದ್ದಾಳೆ.