alex Certify ಕರ ವಸೂಲಾತಿಯಲ್ಲಿ ನಿರ್ಲಕ್ಷ್ಯ ತೋರಿದ ಪಿಡಿಒಗಳಿಗೆ ಶಾಕ್: ವಾರ್ಷಿಕ ವೇತನ ಬಡ್ತಿಗೆ ತಡೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕರ ವಸೂಲಾತಿಯಲ್ಲಿ ನಿರ್ಲಕ್ಷ್ಯ ತೋರಿದ ಪಿಡಿಒಗಳಿಗೆ ಶಾಕ್: ವಾರ್ಷಿಕ ವೇತನ ಬಡ್ತಿಗೆ ತಡೆ

ಚಿತ್ರದುರ್ಗ: ಜಿಲ್ಲೆಯ ಗ್ರಾಮ ಪಂಚಾಯತಿಗಳ ವ್ಯಾಪ್ತಿಯಲ್ಲಿ ಕರ ವಸೂಲಾತಿ ಆಂದೋಲನ ಹಮ್ಮಿಕೊಂಡು ತೆರಿಗೆ ವಸೂಲಾತಿ ಮಾಡಿ ಪ್ರಗತಿ ಸಾಧಿಸುವಲ್ಲಿ ನಿರ್ಲಕ್ಷ್ಯ ತೋರಿದ ಮೂವರು ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳಿಗೆ ಒಂದು ವಾರ್ಷಿಕ ವೇತನ ಬಡ್ತಿಯನ್ನು ಸಂಚಿತ ಪರಿಣಾಮ ಸಹಿತವಾಗಿ ತಡೆಹಿಡಿಯುವ ದಂಡನೆ ವಿಧಿಸಿ ಜಿ.ಪಂ. ಸಿಇಒ ಎಸ್.ಜೆ. ಸೋಮಶೇಖರ್ ಆದೇಶ ಹೊರಡಿಸಿದ್ದಾರೆ.

ಜಿಲ್ಲೆಯ ಎಲ್ಲ ಗ್ರಾಮ ಪಂಚಾಯತಿಗಳಲ್ಲಿ ಕರ ವಸೂಲಾತಿ ಕುರಿತಂತೆ ಆಂದೋಲನ ಹಮ್ಮಿಕೊಂಡು ತೆರಿಗೆ ವಸೂಲಾತಿಯಲ್ಲಿ ಪ್ರಗತಿ ಸಾಧಿಸುವಂತೆ ಜಿಲ್ಲಾ ಪಂಚಾಯತಿ ವತಿಯಿಂದ ಈ ಹಿಂದೆಯೇ ಸೂಚನೆ ನೀಡಲಾಗಿತ್ತು.  ಅಲ್ಲದೆ ಹಲವು ಸಭೆಗಳನ್ನು ಕೈಗೊಂಡು, ಪತ್ರಗಳ ಮೂಲಕ ಹಾಗೂ ವಿಡಿಯೋ ಸಂವಾದ ಮೂಲಕ ತಿಳಿಸಲಾಗಿತ್ತು.

ಆದರೆ, ಮೂವರು ಗ್ರಾ.ಪಂ. ಪಿಡಿಒಗಳು ಆಯಾ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಕರ ವಸೂಲಾತಿ ಆಂದೋಲನ ಹಮ್ಮಿಕೊಂಡು, ತೆರಿಗೆ ವಸೂಲಾತಿಯಲ್ಲಿ ಪ್ರಗತಿ ಸಾಧಿಸಿರಲಿಲ್ಲ. ಚಳ್ಳಕೆರೆ ತಾಲ್ಲೂಕು ದೇವರೆಡ್ಡಿಹಳ್ಳಿ ಗ್ರಾ.ಪಂ. ಪಿಡಿಒ ವೇದವ್ಯಾಸಲು ಅವರು ಕರ ವಸೂಲಾತಿಯಲ್ಲಿ ಶೇ. 27.88 ರಷ್ಟು, ಹಿರೇಹಳ್ಳಿ ಗ್ರಾ.ಪಂ. ಪಿಡಿಒ ನರಸಿಂಹಪ್ಪ ಶೇ. 37.77 ಹಾಗೂ ಹೊಸದುರ್ಗ ತಾಲ್ಲೂಕು ಗುಡ್ಡದ ನೇರಲೆಕೆರೆ ಗ್ರಾ.ಪಂ. ಪಿಡಿಒ ಕುಮಾರ್ ಸಿಂಗ್ ಬಿ.ಎಲ್. ಅವರು ಕೇವಲ ಶೇ. 36.68 ರಷ್ಟು ಮಾತ್ರ ತೆರಿಗೆ ವಸೂಲಾತಿ ಮಾಡಿದ್ದಾರೆ.

ಇವರು ಕರ್ತವ್ಯದಲ್ಲಿ ನಿರ್ಲಕ್ಷ್ಯ ತೋರಿ ಜಿಲ್ಲೆಯ ಪ್ರಗತಿ ಕುಂಠಿತಗೊಳ್ಳಲು ಕಾರಣರಾಗಿದ್ದನ್ನು ಪರಿಗಣಿಸಿ ಕಾರಣ ಕೇಳಿ ಪಿಡಿಒಗಳಿಗೆ ನೋಟಿಸ್ ನೀಡಲಾಗಿತ್ತು, ಈ ನೋಟಿಸ್‍ಗೆ ಸೂಕ್ತ ಸಮಜಾಯಿಷಿ ಸಲ್ಲಿಸಿರುವುದಿಲ್ಲ. ಹೀಗಾಗಿ ತೆರಿಗೆ ವಸೂಲಾತಿಯಲ್ಲಿ ನಿರ್ಲಕ್ಷ್ಯ ವಹಿಸಿ ಪ್ರಗತಿಗೆ ಕುಂಠಿತರಾಗಲು ಕಾರಣರಾದ ಈ ಮೂವರು ಪಿಡಿಒಗಳಿಗೆ ಒಂದು ವಾರ್ಷಿಕ ವೇತನ ಬಡ್ತಿಯನ್ನು ಸಂಚಿತ ಪರಿಣಾಮ ಸಹಿತವಾಗಿ ತಡೆಹಿಡಿಯುವ ದಂಡನೆ ವಿಧಿಸಿ ಆದೇಶಿಸಲಾಗಿದೆ ಎಂದು ಜಿ.ಪಂ. ಸಿಇಒ ಸೋಮಶೇಖರ್ ಅವರು ಆದೇಶದಲ್ಲಿ ತಿಳಿಸಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...