
ಬೆಂಗಳೂರು: ಇಂದು ವರ್ಷದ ಮೊದಲ ಹಬ್ಬ ಮಕರ ಸಂಕ್ರಾಂತಿ ಹಿನ್ನೆಲೆ ಎಲ್ಲೆಡೆ ಸಂಭ್ರಮ ಮನೆ ಮಾಡಿದೆ. ಇಂದು ಗವಿಗಂಗಾಧರೇಶ್ವರ ದೇವಾಲಯದಲ್ಲಿ ವಿಸ್ಮಯ ನಡೆಯಲಿದೆ.
ಬೆಂಗಳೂರಿನ ಬಸವನಗುಡಿಯಲ್ಲಿರುವ ಗವಿಪುರಂ ಗವಿ ಗಂಗಾಧರೇಶ್ವರ ದೇವಾಲಯದಲ್ಲಿ ಸೂರ್ಯ ರಶ್ಮಿ ಶಿವನನ್ನು ಸ್ಪರ್ಶಿಸುವ ವಿಸ್ಮಯ ಕಣ್ತುಂಬಿಕೊಳ್ಳಬಹುದು. ದಕ್ಷಿಣ ಪಥದಿಂದ ಸೂರ್ಯ ಉತ್ತರ ಪಥಕ್ಕೆ ಸಾಗುವ ವೇಳೆ ಸೂರ್ಯ ರೇಷ್ಮೆ ಶಿವಲಿಂಗವನ್ನು ಸ್ಪರ್ಶಿಸುತ್ತದೆ.
ಈ ಹಿನ್ನೆಲೆಯಲ್ಲಿ ಇಂದು ಗವಿಗಂಗಾಧರೇಶ್ವರ ದೇವಾಲಯದಲ್ಲಿ ವಿಶೇಷ ಪೂಜೆ ಮುಂಜಾನೆಯಿಂದಲೇ ಆರಂಭವಾಗಿದೆ, ಮಧ್ಯಾಹ್ನ 12:30 ರವರೆಗೆ ದೇವಾಲಯ ತೆರೆದಿರುತ್ತದೆ. ಮಧ್ಯಾಹ್ನ 12:30 ರ ನಂತರ ಸಾರ್ವಜನಿಕರಿಗೆ ಅವಕಾಶ ಇರುವುದಿಲ್ಲ. ಸಂಜೆ 4 ಗಂಟೆಗೆ ದೇವಾಲಯ ತೆರೆದು ದೇವರಿಗೆ ವಿಶೇಷ ಪೂಜೆ ಸಲ್ಲಿಸಲಾಗುವುದು.
ಸಂಜೆ 5 ಗಂಟೆ 14ನೇ ನಿಮಿಷಕ್ಕೆ ಸೂರ್ಯರಶ್ಮಿ ಸ್ಪರ್ಶವಾಗಲಿದೆ. 5 ಗಂಟೆ 17 ನಿಮಿಷದವರೆಗೂ ಸೂರ್ಯರಶ್ಮಿ ಸ್ಪರ್ಶವಾಗಲಿದೆ. ಗವಿ ಗಂಗಾಧರೇಶ್ವರನನ್ನು ಸೂರ್ಯ ರಶ್ಮಿ ಸ್ಪರ್ಶಿಸಿದ ನಂತರ ದರ್ಶನಕ್ಕೆ ಭಕ್ತರಿಗೆ ಅವಕಾಶ ನೀಡಲಾಗುವುದು.