![](https://kannadadunia.com/wp-content/uploads/2022/11/dead-body-istock-1123564-1656879971-1126790-1657851207-1-1127357-1658004883.jpg)
ಶಿವಮೊಗ್ಗ: ಗಂಭೀರ ಅಪರಾಧ ಪ್ರಕರಣದಲ್ಲಿ ಭಾಗಿಯಾದ ಆರೋಪಿತನಾಗಿದ್ದ ರೌಡಿಶೀಟರ್ ಸುಹೇಲ್ ಅಲಿಯಾಸ್ ಕೋಬ್ರಾ(29) ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಶುಕ್ರವಾರ ತಡರಾತ್ರಿ ಮೃತಪಟ್ಟಿದ್ದಾನೆ.
ತೀರ್ಥಹಳ್ಳಿಯ ವಿವಿಧ ಬಡಾವಣೆಗಳಲ್ಲಿ ವಾಸವಾಗಿದ್ದ ಕೋಬ್ರಾ ವಿರುದ್ಧ ಕೊಲೆ, ಸುಲಿಗೆ, ದರೋಡೆ, ಕಳವು, ಗಲಾಟೆ ಸೇರಿದಂತೆ ಹಲವು ಅಪರಾಧ ಪ್ರಕರಣ ದಾಖಲಾಗಿದ್ದವು. ಕೆಲವು ದಿನಗಳ ಹಿಂದೆ ಶಿರಸಿ ಸಮೀಪ ಅಡಿಕೆ ವ್ಯಾಪಾರಿಯಿಂದ 50 ಲಕ್ಷ ರೂ. ದರೋಡೆ ಮಾಡಿದ ಪ್ರಕರಣದಲ್ಲಿ ಈತ ಭಾಗಿಯಾಗಿದ್ದ ಆರೋಪ ಕೇಳಿ ಬಂದಿತ್ತು.
ನವೆಂಬರ್ 21 ರಂದು ಕೋಬ್ರಾ ಗಡಿಪಾರಿಗೆ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದರು. ಇದರಿಂದ ಆತಂಕಗೊಂಡ ಕೋಬ್ರಾ ನವೆಂಬರ್ 25 ರಂದು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದು, ಆತನನ್ನು ತೀರ್ಥಹಳ್ಳಿಯ ಆಸ್ಪತ್ರೆಗೆ ನಂತರ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಿ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ಸೇರಿಸಲಾಗಿತ್ತು.
ಚಿಕಿತ್ಸೆ ಫಲಕಾರಿಯಾಗದೆ ಶುಕ್ರವಾರ ತಡರಾತ್ರಿ ಮೃತಪಟ್ಟಿದ್ದಾನೆ. ಆತನಿಗೆ ಗರ್ಭಿಣಿ ಪತ್ನಿ, ಎರಡು ವರ್ಷದ ಗಂಡು ಮಗು ಇದೆ.