ಚಿತ್ರದುರ್ಗ: ಚಿತ್ರದುರ್ಗ ನಗರದಲ್ಲಿ ಹಾಡಹಗಲೇ ಚಾಕು ತೋರಿಸಿ 8 ಲಕ್ಷ ರೂ. ದರೋಡೆ ಮಾಡಲಾಗಿದೆ. ಇಂಡಿಯನ್ ಆಯಿಲ್ ಫೆಡರೇಶನ್ ನೌಕರ ಪ್ರಶಾಂತ್ ಶುಕ್ರವಾರ ಜಮಾ ಆಗಿದ್ದ ಹಣವನ್ನು ಮನೆಯಲ್ಲಿ ಇಟ್ಟುಕೊಂಡು ಶನಿವಾರ ಬೆಳಗ್ಗೆ ಸಂಸ್ಥೆಗೆ ತೆಗೆದುಕೊಂಡು ಹೋಗುವ ವೇಳೆ ಚಿತ್ರದುರ್ಗದ ಐಯುಡಿಪಿ ಬಡಾವಣೆಯ 11ನೇ ಅಡ್ಡರಸ್ತೆಯಲ್ಲಿ ನಾಲ್ವರು ದುಷ್ಕರ್ಮಿಗಳು ದಾಳಿ ಮಾಡಿ ಚಾಕು ತೋರಿಸಿ ಹಣ ಕಸಿದುಕೊಂಡು ಪರಾರಿಯಾಗಿದ್ದಾರೆ.
ಪ್ರಶಾಂತ್ ಹಣ ತೆಗೆದುಕೊಂಡು ಹೋಗುತ್ತಿದ್ದ ವೇಳೆಯಲ್ಲಿ ದುಷ್ಕರ್ಮಿಗಳ ತಂಡ ಚಾಕು ತೋರಿಸಿ ಬೆದರಿಸಿದ್ದು ಕೈಯಲ್ಲಿದ್ದ ಹಣದ ಬ್ಯಾಕ್ ಕಸಿದುಕೊಂಡು ಪರಾರಿಯಾಗಿದೆ. ಸ್ಥಳೀಯರು ದರೋಡೆಕೋರರನ್ನು ಹಿಡಿಯುವ ಪ್ರಯತ್ನ ನಡೆಸಿದರೂ ಈ ವೇಳೆಗೆ ಅವರು ಪರಾರಿಯಾಗಿದ್ದಾರೆ ಎನ್ನಲಾಗಿದೆ. ಮಾಹಿತಿ ತಿಳಿದ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.