
ತೆಲಂಗಾಣದ ಆದಿಲಾಬಾದ್ ಮತ್ತು ನಲ್ಗೊಂಡ ಜಿಲ್ಲೆಗಳ ರಸ್ತೆಗಳು ರಕ್ತಸಿಕ್ತವಾಗಿವೆ. ಸೋಮವಾರ ಮಧ್ಯರಾತ್ರಿ ಎರಡು ಪ್ರತ್ಯೇಕ ಅಪಘಾತಗಳಲ್ಲಿ ಎಂಟು ಮಂದಿ ಸಾವನ್ನಪ್ಪಿದ್ದಾರೆ. ವಿವರಗಳ ಪ್ರಕಾರ, ಆದಿಲಾಬಾದ್ ಜಿಲ್ಲೆಯ ಗುಡಿಹತ್ನೂರು ಮಂಡಲದ ಮೇಕಲಗಂಡಿ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಕಾರೊಂದು ನಿಯಂತ್ರಣ ತಪ್ಪಿ ಡಿವೈಡರ್ಗೆ ಡಿಕ್ಕಿ ಹೊಡೆದು ಪಲ್ಟಿಯಾಗಿದೆ. ಅಪಘಾತದಲ್ಲಿ ಐವರು ಸಾವನ್ನಪ್ಪಿದ್ದು, ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಆದಿಲಾಬಾದ್ ಮೂಲದ ಮೊಯಿಜ್(60), ಅಲಿ(8), ಖಾಜಾ ಮೊಯಿನುದ್ದೀನ್(40) ಮತ್ತು ಮೊಹಮ್ಮದ್ ಉಸ್ಮಾನುದ್ದೀನ್(10) ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಗಾಯಾಳುಗಳನ್ನು ಚಿಕಿತ್ಸೆಗಾಗಿ ರಿಮ್ಸ್ ಗೆ ಕರೆದೊಯ್ಯಲಾಗಿದೆ. ಮತ್ತೋರ್ವ ವ್ಯಕ್ತಿ ಚಿಕಿತ್ಸೆ ಪಡೆಯುತ್ತಿದ್ದ ವೇಳೆ ಸಾವನ್ನಪ್ಪಿದ್ದಾರೆ. ಮೃತರೆಲ್ಲರೂ ಆದಿಲಾಬಾದ್ ಟೀಚರ್ಸ್ ಕಾಲೋನಿಗೆ ಸೇರಿದವರು ಎಂದು ಗುರುತಿಸಲಾಗಿದೆ. ಭೈಂಸಾದಿಂದ ಆದಿಲಾಬಾದ್ಗೆ ಬರುತ್ತಿದ್ದಾಗ ಈ ಅವಘಡ ಸಂಭವಿಸಿದೆ. ಘಟನೆಯ ಕುರಿತು ಹೆಚ್ಚಿನ ವಿವರಗಳು ಇನ್ನಷ್ಟೇ ತಿಳಿಯಬೇಕಿದೆ.
ಮತ್ತೊಂದು ಘಟನೆಯಲ್ಲಿ ನಲ್ಗೊಂಡ ಜಿಲ್ಲೆಯಲ್ಲಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ಮೂವರು ಸಾವನ್ನಪ್ಪಿದ್ದಾರೆ. ತ್ರಿಪುರಾರಂ ಮಂಡಲದ ಗುಂಟಿಪಲ್ಲಿ ಅಣ್ಣಾರಾಮ್ ಗ್ರಾಮದ ಮಲ್ಲಿಕಾಂತಿ ದಿನೇಶ್(22) ತನ್ನ ಸ್ನೇಹಿತರಾದ ವೇಮುಲಪಲ್ಲಿ ಮಂಡಲದ ಮೊಳಕಪಟ್ಟಣ ಗ್ರಾಮದ ವಲಪುದಾಸು ವಂಶಿ(22) ಮತ್ತು ಮದ್ಗುಲಪಲ್ಲಿ ಮಂಡಲದ ಅಗಮೋತ್ಕೂರು ಗ್ರಾಮದ ಅಭಿರಲ್ಲ ಶ್ರೀಕಾಂತ್(21) ಅವರೊಂದಿಗೆ ಸೂರ್ಯಪೇಟ್ ಜಿಲ್ಲೆಯ ಕೊಡದ ಪಟ್ಟಣಕ್ಕೆ ಹೊಸ ಕಾರ್ ಖರೀದಿಸಲು ತೆರಳಿದ್ದರು. ಸ್ವಲ್ಪ ಹಣ ಪಾವತಿಸಿ ದ್ವಿಚಕ್ರ ವಾಹನದಲ್ಲಿ ಸ್ವಗ್ರಾಮಕ್ಕೆ ತೆರಳುತ್ತಿದ್ದ ವೇಳೆ ಚಿಲುಕೂರು ಮಂಡಲದ ಮಿಟ್ಸ್ ಕಾಲೇಜಿನ ಬಳಿ ಲಾರಿ ಡಿಕ್ಕಿ ಹೊಡೆದಿದೆ. ಪರಿಣಾಮ ಮೂವರೂ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.