![](https://kannadadunia.com/wp-content/uploads/2024/06/darshan-arrest-22.png)
ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದ ತನಿಖೆ ಮುಂದುವರೆದಂತೆ ಬೆಚ್ಚಿ ಬೀಳಿಸುವ ಸಂಗತಿಗಳು ಬಯಲಾಗುತ್ತಿವೆ. ಆರೋಪಿಗಳು ರೇಣುಕಾಸ್ವಾಮಿಯನ್ನು ಕೊಲೆ ಮಾಡಿದ ನಂತರ ಆತನ ಮೈಮೇಲಿದ್ದ ಚಿನ್ನದ ಆಭರಣಗಳನ್ನು ದೋಚಿದ ವಿಚಾರ ಪೊಲೀಸರ ತನಿಖೆಯಲ್ಲಿ ಬೆಳಕಿಗೆ ಬಂದಿದೆ.
ದರ್ಶನ್ ಮತ್ತು ಸಹಚರರನ್ನು ಶನಿವಾರ ನ್ಯಾಯಾಲಯಕ್ಕೆ ಹಾಜರುಪಡಿಸಿದಾಗ ವಾದ ಮಂಡಿಸಿದ್ದ ಪೊಲೀಸರ ಪರ ವಿಶೇಷ ಅಭಿಯೋಜಕರು, ರೇಣುಕಾಸ್ವಾಮಿಗೆ ವಿದ್ಯುತ್ ಶಾಕ್ ನೀಡಿ ಕ್ರೌರ್ಯ ಮೆರೆದಿದ್ದರು ಎನ್ನುವ ಭಯಾನಕ ಸಂಗತಿಯನ್ನು ಬಹಿರಂಗಪಡಿಸಿದ್ದರು. ಅದಕ್ಕಿಂತಲೂ ಹೇಯ ಕೃತ್ಯ ಎಸಗಿರುವುದು ಪೊಲೀಸರ ತನಿಖೆಯಲ್ಲಿ ಬಯಲಾಗಿದೆ.
ರೇಣುಕಾ ಸ್ವಾಮಿ ಕಿಡ್ನಾಪ್ ನಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಚಿತ್ರದುರ್ಗದ ದರ್ಶನ್ ಅಭಿಮಾನಿ ಬಳಗದ ಅಧ್ಯಕ್ಷ ರಾಘವೇಂದ್ರ ಎಂಬಾತನ ಕೃತ್ಯ ಪೊಲೀಸರ ವಿಚಾರಣೆ ವೇಳೆ ಬಯಲಾಗಿದೆ. ಪಟ್ಟಣಗೆರೆ ಶೆಡ್ ನಲ್ಲಿ ರೇಣುಕಾಸ್ವಾಮಿ ಕೊಲೆ ಮಾಡಿದ ನಂತರ ಆತನ ಮೈಮೇಲಿದ್ದ ಚಿನ್ನದ ಸರವನ್ನು ರಾಘವೇಂದ್ರ ದೋಚಿದ್ದ.
ರೇಣುಕಾಸ್ವಾಮಿ ಕೊಲೆಯಾದ ನಂತರ ಪಟ್ಟಣಗೆರೆ ಶೆಡ್ ನಿಂದ ಹೊರಹೋಗಿದ್ದ ರಾಘವೇಂದ್ರನನ್ನು ಇತರೆ ಆರೋಪಿಗಳು ಕರೆ ಮಾಡಿ 10 ಲಕ್ಷ ರೂಪಾಯಿ ಕೊಡುತ್ತೇವೆ ಬಾ ಎಂದಾಗ ಹಣದಾಸೆಗೆ ಮರಳಿ ಬಂದಿದ್ದ. ರೇಣುಕಾಸ್ವಾಮಿಯ ಶವ ಎಸೆಯಲು ಇತರೆ ಆರೋಪಿಗಳ ಜೊತೆಗೆ ಹೋಗಿದ್ದ. ಶವ ಎಸೆಯುವ ಮೊದಲು ರೇಣುಕಾಸ್ವಾಮಿ ಮೈ ಮೇಲಿದ್ದ ಚಿನ್ನದ ಸರ, ಉಂಗುರ, ಬೆಳ್ಳಿ ಕಡಗ, ವಾಚ್ ಗಳನ್ನು ರಾಘವೇಂದ್ರ ತೆಗೆದುಕೊಂಡಿದ್ದ ಎನ್ನಲಾಗಿದೆ.
ರಾಘವೇಂದ್ರ ಪತ್ನಿಗೆ ಕರೆ ಮಾಡಿ ಬೆಂಗಳೂರಿಗೆ ಕರೆಸಿಕೊಂಡು ಲಾಡ್ಜ್ ನಲ್ಲಿ ಇರಿಸಿದ್ದ. ರೇಣುಕಾಸ್ವಾಮಿ ಶವದ ಮೇಲಿದ್ದ ಆಭರಣಗಳನ್ನು ಪತ್ನಿಗೆ ಕೊಟ್ಟಿದ್ದು, ಆಕೆ ಚಿತ್ರದುರ್ಗಕ್ಕೆ ತೆಗೆದುಕೊಂಡು ಹೋಗಿದ್ದಳು. ಪತ್ನಿಯಿಂದ ಆಭರಣಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ ಎನ್ನಲಾಗಿದೆ.
10 ದಿನ ಕಳೆದರೂ ಪತ್ತೆಯಾಗದ ಮೊಬೈಲ್
ಕೊಲೆಯಾಗಿ 10 ದಿನ ಕಳೆದರೂ ರೇಣುಕಾಸ್ವಾಮಿ ಮೊಬೈಲ್ ಪತ್ತೆಯಾಗಿಲ್ಲ. ಜೂನ್ 8ರಂದು ಚಿತ್ರದುರ್ಗದಿಂದ ರೇಣುಕಾಸ್ವಾಮಿಯನ್ನು ಅಪಹರಿಸಲಾಗಿತ್ತು. ಅಂದು ಬೆಳಿಗ್ಗೆ ಅವರ ಮೊಬೈಲ್ ಸ್ವಿಚ್ ಆಫ್ ಆಗಿತ್ತು. ಜೂನ್ 8ರಂದು ಮಧ್ಯಾಹ್ನ ಆರ್.ಆರ್. ನಗರದಲ್ಲಿ ಮೊಬೈಲ್ ಸ್ವಿಚ್ ಆನ್ ಆಗಿದ್ದು, ಮತ್ತೆ ಆರ್.ಆರ್. ನಗರದ ಪಟ್ಟಣಗೆರೆಯಲ್ಲಿ ಸ್ವಿಚ್ ಆಫ್ ಆಗಿದೆ. ಅದೇ ದಿನ ರಾತ್ರಿ ರೇಣುಕಾಸ್ವಾಮಿ ಮೃತದೇಹವನ್ನು ದರ್ಶನ್ ಸಹಚರರು ಬಿಸಾಡಿದ್ದರು. ಹಲವು ಕಡೆ ಹುಡುಕಾಡಿದರೂ ರೇಣುಕಾ ಸ್ವಾಮಿ ಮೊಬೈಲ್ ಪತ್ತೆಯಾಗಿಲ್ಲ. ರಾಜ ಕಾಲುವೆಯಲ್ಲಿ ಬಿಸಾಡಿದ್ದಾಗಿ ಆರೋಪಿಗಳು ಹೇಳಿದ್ದು, ಹುಡುಕಾಟ ನಡೆಸಲಾಗಿದೆ.
ಆರೋಪಿಗಳಲ್ಲಿ ಅನೇಕರಿಗೆ ದರ್ಶನ್ ಪರಿಚಯವೇ ಇಲ್ಲ
18 ಆರೋಪಿಗಳ ಪೈಕಿ 7 ಆರೋಪಿಗಳಿಗೆ ದರ್ಶನ್ ಯಾರೆಂಬುದೇ ಗೊತ್ತಿಲ್ಲ. ಆದರೆ ದರ್ಶನ್ ಗಾಗಿ ಕೊಲೆ ಪ್ರಕರಣದಲ್ಲಿ 7 ಆರೋಪಿಗಳು ಸಹಕಾರ ನೀಡಿದ್ದಾರೆ. ಇವರಿಗೆ ನಟ ದರ್ಶನ್ ಅವರ ನೇರ ಪರಿಚಯವೇ ಇಲ್ಲ. ಕೊಲೆ ಮಾಡಿದ ನಂತರ ದರ್ಶನ್ ಅವರನ್ನು ಮೂವರು ಆರೋಪಿಗಳು ಮೈಸೂರಿನಲ್ಲಿ ಭೇಟಿಯಾಗಿದ್ದಾರೆ. ಕೇಶವ್, ಕಾರ್ತಿಕ್, ನಿಖಿಲ್ ಮೈಸೂರಿನಲ್ಲಿ ದರ್ಶನ್ ಅವರನ್ನು ನೋಡಿದ್ದಾರೆ. ರೇಣುಕಾ ಸ್ವಾಮಿ ಶವವನ್ನು ಈ ಆರೋಪಿಗಳು ಬಿಸಾಡಿದ್ದರು.
ರೇಣುಕಾ ಸ್ವಾಮಿ ಅಪಹರಣ ಪ್ರಕರಣದಲ್ಲಿ ರಾಘವೇಂದ್ರ ಪ್ರಮುಖ ಪಾತ್ರ ವಹಿಸಿದ್ದ. ದರ್ಶನ್ ಅಭಿಮಾನಿಗಳಾದ ಜಗ್ಗು ಮತ್ತು ಅನುಕುಮಾರ್ ಅವರನ್ನು ಕರೆದುಕೊಂಡು ರೇಣುಕಾಸ್ವಾಮಿಯನ್ನು ಚಿತ್ರದುರ್ಗದಿಂದ ಅಪಹರಿಸಿದ್ದ.