
ಬೆಂಗಳೂರು: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಿಂದ ಗೃಹ ಸಾಲ ಕೊಡಿಸಿ ವಂಚಿಸಿದ ಆರೋಪದಡಿ ಮಾಜಿ ಸಚಿವ ಕೃಷ್ಣಯ್ಯ ಶೆಟ್ಟಿಗೆ ಮಧ್ಯಂತರ ರಿಲೀಫ್ ಸಿಕ್ಕಿದೆ.
ಅವರಿಗೆ ವಿಧಿಸಿದ ಶಿಕ್ಷೆ ಅಮಾನತ್ತಿನಲ್ಲಿಟ್ಟು ಹೈಕೋರ್ಟ್ ಜಾಮೀನು ನೀಡಿದೆ. ಠೇವಣಿ ಇಟ್ಟ ಹಣ ಬಿಡುಗಡೆ ಮಾಡಿದಂತೆ ತಡೆಯಾಜ್ಞೆ ನೀಡಲಾಗಿದೆ. ಜನಪ್ರತಿನಿಧಿಗಳ ವಿಶೇಷ ಕೋರ್ಟ್ ಮೂರು ವರ್ಷ ಶಿಕ್ಷೆ ವಿಧಿಸಿತ್ತು. ಶಿಕ್ಷೆ ಪ್ರಶ್ನಿಸಿ ಕೃಷ್ಣಯ್ಯ ಶೆಟ್ಟಿ ಮೇಲ್ಮನವಿ ಸಲ್ಲಿಸಿದ್ದರು.
ಕೃಷ್ಣಯ್ಯ ಶೆಟ್ಟಿ 1993ರಲ್ಲಿ ಬಾಲಾಜಿ ಕೃಪಾ ಎಂಟರ್ಪ್ರೈಸಸ್ ಮಾಲೀಕರಾಗಿದ್ದ ವೇಳೆ ಬಿಟಿಎಸ್, ಕೆಎಸ್ಆರ್ಟಿಸಿ, ಬಿಎಸ್ಎನ್ಎಲ್ ಇತರೆ ಸಾರ್ವಜನಿಕ ಉದ್ದಿಮೆಗಳ 181 ನೌಕರರಿಗೆ ಗೃಹ ನಿರ್ಮಾಣಕ್ಕೆ ಸಾಲ ಕೊಡಿಸುವುದಾಗಿ ಹೇಳಿ ವಂಚಿಸಿದ್ದ ಆರೋಪವಿದೆ. ಬ್ಯಾಂಕಿನಿಂದ ಪಡೆದ ಮೊತ್ತದಲ್ಲಿ 3.53 ಕೋಟಿ ಸಾಲ ತೀರಿಸಿಲ್ಲ. 7.15 ಕೋಟಿ ಸಾಲಕ್ಕೆ ನಕಲಿ ದಾಖಲೆ ಸೃಷ್ಟಿಸಲಾಗಿದೆ ಎಂದು ಆರೋಪಿಸಲಾಗಿತ್ತು. ಮುಖ್ಯ ವಿಚಕ್ಷಣದಳದ ಅಂದಿನ ಮುಖ್ಯಸ್ಥರು ನೀಡಿದ ದೂರು ಆಧರಿಸಿ ಸಿಬಿಐ ತನಿಖೆ ನಡೆಸಿ ದೋಷಾರೋಪ ಪಟ್ಟಿ ಸಲ್ಲಿಸಿತ್ತು.
ಬ್ಯಾಂಕಿಗೆ ವಂಚಿಸಿದ ಆರೋಪದಡಿಯ ಕ್ರಿಮಿನಲ್ ಪ್ರಕರಣದಲ್ಲಿ ಕೃಷ್ಣಯ್ಯ ಶೆಟ್ಟಿ ಅವರಿಗೆ ಜನ ಪ್ರತಿನಿಧಿಗಳ ಸೆಷನ್ಸ್ ನ್ಯಾಯಾಲಯ ಮೂರು ವರ್ಷ ಜೈಲು ಶಿಕ್ಷೆ ವಿಧಿಸಿತ್ತು.