
ಕೋಲಾರ: ಸರ್ವರ್ ಸಮಸ್ಯೆಯಿಂದಾಗಿ ಎರಡು ತಿಂಗಳಿಂದ ಪಡಿತರ ಹಣ ಬಾಕಿ ಉಳಿದುಕೊಂಡಿದ್ದು, ವಾರದೊಳಗೆ ಫಲಾನುಭವಿಗಳ ಖಾತೆಗೆ ಜಮಾ ಮಾಡಲಾಗುವುದು ಎಂದು ಆಹಾರ ಇಲಾಖೆ ಸಚಿವ ಕೆ.ಹೆಚ್. ಮುನಿಯಪ್ಪ ತಿಳಿಸಿದ್ದಾರೆ.
ಕೋಲಾರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ಗ್ಯಾರಂಟಿ ಯೋಜನೆಗಳಿಗೆ ಹಣ ಹೊಂದಿಸಲು ಸಂಪನ್ಮೂಲ ಕೊರತೆ ಇಲ್ಲ. ಸರ್ವರ್ ಸಮಸ್ಯೆಯಿಂದಾಗಿ ಎರಡು ತಿಂಗಳಿಂದ ಪಡಿತರ ಹಣ ಬಾಕಿ ಉಳಿದುಕೊಂಡಿತ್ತು ಎಂದು ತಿಳಿಸಿದ್ದಾರೆ.
ಇದೀಗ ಸರ್ವರ್ ಸಮಸ್ಯೆ ಬಗೆಹರಿದಿದ್ದು, ಶೀಘ್ರವೇ ಹಣ ಪಾವತಿಸಲಾಗುವುದು. ಪ್ರತಿ ತಿಂಗಳು 10ರಂದು ಖಾತೆಗೆ ಹಣ ಜಮಾ ಮಾಡಲಾಗುತ್ತಿತ್ತು. ಈ ಬಾರಿ ತಡವಾಗಿದೆ. ಬಿಪಿಎಲ್ ಕಾರ್ಡ್ ಪರಿಶೀಲನೆ ಕಾರ್ಯ ಮುಂದುವರಿದಿದ್ದು, ಬಿಪಿಎಲ್ ಗೆ ಅರ್ಹತೆ ಇಲ್ಲದ ಕಾರ್ಡ್ ಗಳನ್ನು ಎಪಿಎಲ್ ಆಗಿ ಪರಿವರ್ತಿಸಲಾಗುವುದು. ಪ್ರತಿ ಕೆಜಿ ಅಕ್ಕಿಗೆ 15 ರೂ. ಸಬ್ಸಿಡಿ ದರದಲ್ಲಿ ವಿತರಿಸಲಾಗುವುದು ಎಂದು ಹೇಳಿದ್ದಾರೆ.