![](https://kannadadunia.com/wp-content/uploads/2023/02/camel.png)
ಬಿಕಾನೇರ್: ರಾಜಸ್ಥಾನದ ಬಿಕಾನೇರ್ನಲ್ಲಿ ಒಂಟೆಯೊಂದು ಮಾಲೀಕನನ್ನು ಕೊಂದಿದ್ದು, ಕೋಪಗೊಂಡ ಸ್ಥಳೀಯರು ಒಂಟೆಯನ್ನು ಹೊಡೆದು ಕೊಂದ ವಿಡಿಯೋ ವೈರಲ್ ಆಗಿದೆ.
ಮಾಲೀಕನನ್ನು ಕೊಂದಿದ್ದರಿಂದ ಒಂಟೆ ಮೇಲೆ ಕೋಪಗೊಂಡ ಸ್ಥಳೀಯರು ಒಂಟೆಯನ್ನು ಬರ್ಬರವಾಗಿ ಹೊಡೆದು ಕೊಂದ ಭೀಕರ ಘಟನೆ ರಾಜಸ್ಥಾನದ ಬಿಕಾನೇರ್ ಜಿಲ್ಲೆಯ ಪಂಚು ಪ್ರದೇಶದಲ್ಲಿ ನಡೆದಿದೆ.
ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ವೈರಲ್ ವೀಡಿಯೊದಲ್ಲಿ ಕನಿಷ್ಠ ಅರ್ಧ ಡಜನ್ ಜನರು ಒಂಟೆಯ ತಲೆಯ ಮೇಲೆ ದೊಣ್ಣೆಯಿಂದ ಹೊಡೆದಿದ್ದಾರೆ. ಕ್ರೂರ ದಾಳಿಯಲ್ಲಿ ಪ್ರಾಣಿ ತೀವ್ರವಾಗಿ ಗಾಯಗೊಂಡಿದೆ. ಸಾಯುವವರೆಗೂ ಅಲ್ಲಿದ್ದವರು ಒಂಟೆಯನ್ನು ಹೊಡೆದಿದ್ದಾರೆ.
ಒಂಟೆ ತನ್ನ ದವಡೆಯಲ್ಲಿ ಮೃತನ ತಲೆ ಹಿಡಿದು ಕೊಂದಿದೆ. ಘಟನೆಯಿಂದ ಕೋಪಗೊಂಡ ಸ್ಥಳೀಯ ನಿವಾಸಿಗಳು ಒಂಟೆಯನ್ನು ಮರಕ್ಕೆ ಕಟ್ಟಿಹಾಕಿ ಪ್ರಾಣಿಯ ತಲೆಗೆ ಕ್ರೂರವಾಗಿ ಹೊಡೆದಿದ್ದಾರೆ. ಗ್ರಾಮದ ನಿವಾಸಿಗಳ ಪ್ರಕಾರ, ಒಂಟೆಗೆ ಹುಚ್ಚುಹಿಡಿದು ಅದರ ಮಾಲೀಕರನ್ನು ಕೊಂದಿದೆ. ಇದರಿಂದ ಜನರಿಗೆ ಅಪಾಯವಾಗಬಹುದೆಂಬ ಕಾರಣಕ್ಕೆ ಕೊಂದಿದ್ದಾರೆ ಎಂದು ಹೇಳಲಾಗಿದೆ.