ಬೆಂಗಳೂರು: ಕೆಎಎಸ್ ಸೂಪರ್ ಟೈಮ್ ಸ್ಕೇಲ್ ಮತ್ತು ಕೆಎಎಸ್ ಆಯ್ಕೆ ಶ್ರೇಣಿ ಬಡ್ತಿಗೆ ನಿಗದಿಪಡಿಸಿದ ಕನಿಷ್ಠ ಅರ್ಹತಾ ಸೇವೆಯನ್ನು ಕಡಿತಗೊಳಿಸುವ ಸಂಬಂಧ ಸಂಪುಟ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯ ಬಳಿಕ ಕಾನೂನು ಸಚಿವ ಹೆಚ್.ಕೆ. ಪಾಟೀಲ್ ಈ ಬಗ್ಗೆ ಮಾಹಿತಿ ನೀಡಿದ್ದು, ಕರ್ನಾಟಕ ಆಡಳಿತ ಸೇವೆಗಳು ನೇಮಕಾತಿ ತಿದ್ದುಪಡಿ ನಿಯಮಗಳು 2024ಕ್ಕೆ ಸಂಪುಟ ಸಭೆ ಅನುಮೋದನೆ ನೀಡಿದೆ.
ಉನ್ನತ ಮಟ್ಟದ ಹುದ್ದೆಗಳು ಬಹಳ ಖಾಲಿ ಇರುವ ಕಾರಣ ಒಂದು ಬಾರಿಗೆ ಅನ್ವಯವಾಗುವಂತೆ ವೃಂದದಲ್ಲಿ ಕನಿಷ್ಠ ಒಂದು ವರ್ಷ ಪೂರೈಕೆ ಅವಧಿ ಇಳಿಸಲಾಗಿದ್ದು, ಇದರಿಂದ ಬಡ್ತಿ ನೀಡುವ ಸಂದರ್ಭದಲ್ಲಿ ಅನುಕೂಲವಾಗುತ್ತದೆ ಎಂದು ಹೇಳಿದ್ದಾರೆ.
ವೈದ್ಯಕೀಯ ಶಿಕ್ಷಣ ಇಲಾಖೆ ವ್ಯಾಪ್ತಿಯ 18 ವೈದ್ಯಕೀಯ ಕಾಲೇಜುಗಳ ಆಸ್ಪತ್ರೆ ಮತ್ತು ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳಲ್ಲಿ 114 ಮಾಡ್ಯುಲರ್ ಆಪರೇಷನ್ ಥಿಯೇಟರ್ ಗಳನ್ನು 176.70 ಕೋಟಿ ರೂಪಾಯಿ ಅಂದಾಜು ವೆಚ್ಚದಲ್ಲಿ ಸ್ಥಾಪಿಸಲು ಅನುಮೋದನೆ ನೀಡಲಾಗಿದೆ.
ವಿಶೇಷ ವಿವಾಹ ತಿದ್ದುಪಡಿ ನಿಯಮಗಳು 2024ಕ್ಕೆ ಸಚಿವ ಸಂಪುಟ ಅನುಮೋದನೆ ನೀಡಿದ್ದು, ಆನ್ಲೈನ್ ಮೂಲಕವೂ ನೋಂದಣಿಗೆ ಪ್ರಸ್ತಾವನೆ ಸಲ್ಲಿಸುವ ಅವಕಾಶ ನೀಡಲಾಗುವುದು. ಮದುವೆ ಅರ್ಜಿ ಸಲ್ಲಿಕೆ ಶುಲ್ಕ ಪಾವತಿಸಲು ಅವಕಾಶ ಮಾಡಿಕೊಡಲಾಗುವುದು ಎಂದು ಹೇಳಲಾಗಿದೆ.