
ಚರ್ಚ್ ಪಾದ್ರಿಯೊಬ್ಬರು ಅಯ್ಯಪ್ಪ ಸ್ವಾಮಿಯ ದರ್ಶನ ಪಡೆಯುವ ಹೆಬ್ಬಯಕೆಯಿಂದ ತಮಗೆ ವಹಿಸಲಾಗಿದ್ದ ಚರ್ಚ್ ಸೇವಾ ನಿರ್ವಹಣೆಯ ಪದವಿಯನ್ನು ಹಿಂದಿರುಗಿಸಿರುವ ಘಟನೆ ಕೇರಳದಲ್ಲಿ ನಡೆದಿದೆ.
ಅಂಗ್ಲಿಕನ್ ಚರ್ಚ್ ಆಫ್ ಇಂಡಿಯಾದ ರೆವೆರೆಂಡ್ ಮನೋಜ್, ತಮಗೆ ನೀಡಲಾಗಿದ್ದ ಸೇವಾ ನಿರ್ವಹಣೆಯ ಹೊಣೆಯಿಂದ ಹಿಂದೆ ಸರಿದಿದ್ದು, ನಂತರದ ದಿನಗಳಲ್ಲಿ ಅದೇ ಚರ್ಚಿನಲ್ಲಿ ಪಾದ್ರಿಯಾಗಿ ಮುಂದುವರಿಯುವುದಾಗಿ ಹೇಳಿದ್ದಾರೆ.
ರೆವೆರೆಂಡ್ ಮನೋಜ್, ಶಬರಿಮಲೆಗೆ ತೆರಳಿ ಅಯ್ಯಪ್ಪ ಸ್ವಾಮಿಯ ದರ್ಶನ ಪಡೆಯುವ ಸಲುವಾಗಿ 41 ದಿನಗಳ ವ್ರತವನ್ನು ಆಚರಿಸುತ್ತಿದ್ದು, ಅವರ ಈ ನಿರ್ಧಾರಕ್ಕೆ ಕೆಲವರಿಂದ ಟೀಕೆಗಳು ಕೇಳಿ ಬಂದ ಕಾರಣ ಚರ್ಚ್ ಸೇವಾ ನಿರ್ವಹಣೆಯ ಜವಾಬ್ದಾರಿಯಿಂದ ಹಿಂದೆ ಸರಿದಿದ್ದಾರೆ.
ವಿವಾದದ ಮಧ್ಯೆ ತಾವು ಅಯ್ಯಪ್ಪ ಸ್ವಾಮಿಯ ದರ್ಶನ ಪಡೆಯುವ ಯೋಜನೆಯಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಹೇಳಿರುವ ರೆವರೆಂಡ್ ಮನೋಜ್, ಹಿಂದೂ ಆಚರಣೆಗಳ ಹೊರತಾಗಿಯೂ ಆ ಧರ್ಮವನ್ನು ಅರಿಯುವುದು ನನ್ನ ಉದ್ದೇಶವಾಗಿದೆ ಎಂದಿದ್ದಾರೆ.