
ಸಾವಯುವ ಉತ್ಪನ್ನಗಳಿಗೆ ಹೆಚ್ಚುತ್ತಿರುವ ಬೇಡಿಕೆಯ ಲಾಭವನ್ನು ಒಳ್ಳೆಯ ರೀತಿಯಲ್ಲಿ ಪಡೆದುಕೊಳ್ಳುವಂತೆ ಬಿಹಾರದ ರೈತರಿಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಸಲಹೆ ನೀಡಿದ್ದಾರೆ. ಹವಾಮಾನ ಬದಲಾವಣೆಯ ಸಂದರ್ಭದಲ್ಲಿ ಹವಾಮಾನ ಸ್ಥಿತಿಸ್ಥಾಪಕ ಕೃಷಿಯು ಪ್ರಮುಖ ಪಾತ್ರ ವಹಿಸುತ್ತೆ ಎಂದು ದ್ರೌಪದಿ ಮುರ್ಮು ಹೇಳಿದ್ದಾರೆ. ಪಾಟ್ನಾದ ಬಾಪು ಸಭಾಗರ್ ಸಂಭಾಗಣದಲ್ಲಿ ನಡೆದ ರಾಜ್ಯದ ಕೃಷಿ ಮಾರ್ಗ ನಕ್ಷೆಯ ನಾಲ್ಕನೇ ಆವೃತ್ತಿಯನ್ನು ಇಂದು ದ್ರೌಪದಿ ಮುರ್ಮು ಉದ್ಘಾಟಿಸಿದ್ದಾರೆ.
ಪಾಟ್ನಾದಲ್ಲಿ ಮೂರು ದಿನಗಳ ಪ್ರವಾಸದಲ್ಲಿರುವ ರಾಷ್ಟ್ರಪತಿ ದ್ರೌಪದಿ ಮುರ್ಮು 2008ರಿಂದ ಬಿಹಾರದಲ್ಲಿ ಅನುಷ್ಠಾನಗೊಂಡ ಮೂರು ಕೃಷಿ ಮಾರ್ಗಸೂಚಿಗಳ ಬಗ್ಗೆ ಮಾತನಾಡಿದ್ರು. ಇದರಿಂದ ರಾಜ್ಯದಲ್ಲಿ ಭತ್ತ, ಗೋಧಿ ಹಾಗೂ ಮೆಕ್ಕೆಹೋಳ ಸೇರಿದಂತೆ ಅನೇಕ ಬೆಳೆಗಳ ಉತ್ಪನ್ನ ಪ್ರಮಾಣದಲ್ಲಿ ಏರಿಕೆ ಕಂಡಿದೆ. ಅಣಬೆ, ಕಮಲದ ಬೀಜಗಳು ಹಾಗೂ ಮೀನಿನ ಉತ್ಪಾದನೆಯಲ್ಲಿಯೂ ಬಿಹಾರ ಸಾಕಷ್ಟು ಪ್ರಗತಿ ಕಂಡಿದೆ ಅಂತಾ ಮುರ್ಮು ಹೇಳಿದ್ದಾರೆ .
ನಾಲ್ಕನೇ ಆವೃತ್ತಿಯ ಕೃಷಿ ರೋಡ್ ಮ್ಯಾಪ್ 2023ರಿಂದ 2028ರವರೆಗೆ ವಿವಿಧ ಯೋಜನೆಗಳನ್ನು ಹೊಂದಿದ್ದು ಇದರ ಒಟ್ಟೂ ಮೌಲ್ಯ 1.62 ಲಕ್ಷ ಕೋಟಿ ರೂಪಾಯಿ ಆಗಿದೆ. ಬೆಳೆ ವೈವಿದ್ಯೀಕರಣ, ಎಣ್ಣೆ ಕಾಳುಗಳ ಉತ್ಪಾದನೆ, ರಾಗಿ ಸೇರಿದಂತೆ ವಿವಿಧ ಉತ್ಪಾದನೆಯನ್ನು ಹೆಚ್ಚಿಸುವುದು ಇದರ ಪ್ರಮುಖ ಕ್ಷೇತ್ರಗಳಾಗಿವೆ ಎಂದು ದ್ರೌಪದಿ ಮುರ್ಮು ತಿಳಿಸಿದ್ರು.