ಬೆಂಗಳೂರು : ಒಂದು ದೇಹ ಎಂಟು ಜೀವ,ಅಂಗಾಂಗ ದಾನ ಮಾಡಿ ಜೀವ ಉಳಿಸಿ, ಮರಣದ ನಂತರವೂ ಇನ್ನೊಬ್ಬರ ಜೀವನಕ್ಕೆ ಬೆಳಕಾಗಿ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಮನವಿ ಮಾಡಿದ್ದಾರೆ.
ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಮಾಹಿತಿ ಹಂಚಿಕೊಂಡ ಸಚಿವರು “ಮುಖ್ಯಮಂತ್ರಿಗಳಾದ ಸಿದ್ದರಾಮಯಯ್ಯ ನವರು ಅಂಗಾಂಗ ದಾನಿಗಳ ಕುಟುಂಬದವರಿಗೆ ಪ್ರಶಂಸಾ ಪತ್ರ ನೀಡಿ ಗೌರವಿಸಿದರು. ಅಂಗಾಂಗ ದಾನ ಮಾಡಿದ 7 ಕುಟುಂಬದವರನ್ನು ಸನ್ಮಾನಿಸಿ, ಗೌರವಿಸಲಾಯಿತು. ರಾಜ್ಯದಲ್ಲಿ ಅಂಗಾಂಗ ದಾನದ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಆರೋಗ್ಯ ಇಲಾಖೆ ಕಾರ್ಯೋನ್ಮುಖವಾಗಿದೆ’’ ಎಂದಿದ್ದಾರೆ.
ಜೀವಸಾರ್ಥಕತೆ ನಿಟ್ಟಿನಲ್ಲಿ ಪ್ರತಿಯೊಬ್ಬರೂ ಅಂಗಾಂಗ ದಾನಕ್ಕೆ ಒತ್ತು ನೀಡಿದರೆ ಜೀವಗಳನ್ನು ಉಳಿಸಬಹುದು. ಒಬ್ಬ ಮೃತ ವ್ಯಕ್ತಿಯ ಅಂಗಾಂಗ ದಾನದಿಂದ 8 ಜೀವಗಳನ್ನು ಉಳಿಸಬಹುದು. ಯಾವುದೇ ವಯಸ್ಸು ಲಿಂಗ ಭೇದವಿಲ್ಲದೆ ಅಂಗಾಂಗ ಮತ್ತು ಅಂಗಾಂಶಗಳನ್ನು ದಾನ ಮಾಡಬಹುದು. ಪ್ರತಿಯೊಬ್ಬರು ಅಂಗಾಂಗ ದಾನಕ್ಕೆ ಹೆಸರು ನೋಂದಾಯಿಸಿಕೊಂಡು ಮತ್ತೊಬ್ಬರ ಜೀವಕ್ಕೆ ಸಂಜೀವಿನಿಯಾಗಿ ಎಂದು ಅವರು ಮನವಿ ಮಾಡಿದ್ದಾರೆ.