
ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ವಿರುದ್ಧ ವಾಗ್ದಾಳಿ ಮುಂದುವರೆಸಿರುವ ಜೆಡಿಎಸ್ ನಾಯಕ ಎಚ್.ಡಿ. ಕುಮಾರಸ್ವಾಮಿ, ಶಿವಕುಮಾರ್ ಅವರಿಗೆ ದೇವೇಗೌಡರ ಕುಟುಂಬ ಬಿಟ್ಟು ಎಲ್ಲರನ್ನೂ ಖರೀದಿಸಬಹುದಾದ ಶಕ್ತಿ ಇದೆ. ಅವರು ಬಿಜೆಪಿಯ ದೆಹಲಿ ನಾಯಕರನ್ನೇ ಖರೀದಿಸಿದರೂ ಅಚ್ಚರಿಯಿಲ್ಲ ಎಂದು ವ್ಯಂಗ್ಯವಾಡಿದ್ದಾರೆ.
ಬೆಂಗಳೂರಿನಲ್ಲಿ ಮಂಗಳವಾರದಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ನೈಸ್ ಅಕ್ರಮ ಕುರಿತ ದಾಖಲೆಗಳನ್ನು ನಾನು ಬಿಡುಗಡೆ ಮಾಡುವುದು ಖಚಿತ. ಆದರೆ ಬುಧವಾರ ಚಂದ್ರಯಾನ 3ರ ಲ್ಯಾಂಡಿಂಗ್ ಇದ್ದು, ಎಲ್ಲರಂತೆ ನನಗೂ ಸಹ ಈ ಕುರಿತು ಕುತೂಹಲವಿದೆ. ಹಾಗಾಗಿ ದಾಖಲೆಗಳನ್ನು ಬಿಡುಗಡೆ ಮಾಡಲು ಸಾಧ್ಯವಾಗುತ್ತಿಲ್ಲ, ಆದರೆ ಕೆಲ ದಿನಗಳಲ್ಲಿ ನೈಸ್ ಅಕ್ರಮ ಕುರಿತ ದಾಖಲೆ ಬಹಿರಂಗಪಡಿಸುತ್ತೇನೆ ಎಂದು ತಿಳಿಸಿದರು.
ಅವರು ಈವರೆಗೂ ಆಸ್ತಿ ಮಾಡಿಕೊಂಡಿರುವುದು ಸಾಕು. ಇನ್ನಾದರೂ ಲೂಟಿ ಹೊಡೆಯುವುದನ್ನು ನಿಲ್ಲಿಸಲಿ ಎಂದು ಕಿವಿಮಾತು ಹೇಳಿದ ಕುಮಾರಸ್ವಾಮಿ, ನನ್ನನ್ನು ಅವರು ಅಣ್ಣ ಎಂದು ಕರೆಯುತ್ತಾರೆ. ನನ್ನ ಕಿವಿ ಮಾತನ್ನು ಪಾಲಿಸಿದರೆ ಆಗ ಅವರನ್ನು ತಮ್ಮ ಎಂದು ಒಪ್ಪಿಕೊಳ್ಳುತ್ತೇನೆ ಎಂದರು.