
ದೇಶದ ಸಾರ್ವಜನಿಕ ಸಾರಿಗೆ ಮೂಲಸೌಕರ್ಯದಲ್ಲಿ ಡೀಸೆಲ್ ಇಂಧನ ಬಳಕೆಯನ್ನು ಕಡಿಮೆ ಮಾಡಲು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಒತ್ತು ನೀಡಿದ್ದಾರೆ.
ಇಂದೋರ್ ನಲ್ಲಿ ಸೋಮವಾರ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ಡೀಸೆಲ್ ಬಸ್ ಗಳಿಗಿಂತ ಎಲೆಕ್ಟ್ರಿಕ್ ಬಸ್ ಗಳ ಪ್ರಯಾಣಿಕರ ಟಿಕೆಟ್ ದರ ಶೇಕಡ 30 ರಷ್ಟು ಅಗ್ಗವಾಗಬಹುದು ಎಂದು ಹೇಳಿದರು.
ದೇಶಾದ್ಯಂತದ ರಾಜ್ಯಗಳ ರಸ್ತೆ ಸಾರಿಗೆ ನಿಗಮಗಳು ತಮ್ಮ ಬಸ್ ಗಳು ದುಬಾರಿ ಡೀಸೆಲ್ ನಲ್ಲಿ ಓಡುವುದರಿಂದ ಎಂದಿಗೂ ಲಾಭದಾಯಕವಾಗುವುದಿಲ್ಲ. ವಿದ್ಯುತ್ ಹವಾನಿಯಂತ್ರಿತ ಬಸ್ ನ ಪ್ರಯಾಣಿಕರ ಟಿಕೆಟ್ಗಳು ಡೀಸೆಲ್ ಚಾಲನೆಯಲ್ಲಿರುವ ಬಸ್ ಗಿಂತ 30 ಪ್ರತಿಶತದಷ್ಟು ಅಗ್ಗವಾಗಬಹುದು. ದೇಶಾದ್ಯಂತ 50,000 ಎಲೆಕ್ಟ್ರಿಕ್ ಬಸ್ಗಳನ್ನು ಓಡಿಸುವ ಯೋಜನೆಯಲ್ಲಿ ಕೇಂದ್ರ ಸರ್ಕಾರ ಮುಂದುವರಿಯುತ್ತಿದೆ ಎಂದು ಹೇಳಿದರು.
ದೂರದೃಷ್ಟಿಯ ಚಿಂತನೆಯೊಂದಿಗೆ ದೇಶದ ಸಾರಿಗೆ ವ್ಯವಸ್ಥೆಯನ್ನು ಬದಲಾಯಿಸಬೇಕಾಗಿದೆ. ಪೆಟ್ರೋಲ್ ಮತ್ತು ಡೀಸೆಲ್ ಬದಲಿಗೆ ಕಡಿಮೆ ಬೆಲೆಯ ಇಂಧನಗಳಾದ ವಿದ್ಯುತ್, ಹಸಿರು ಹೈಡ್ರೋಜನ್, ಎಥೆನಾಲ್, ಬಯೋ-ಸಿಎನ್ಜಿ, ಮತ್ತು ಜೈವಿಕ ಎಲ್ಎನ್ಜಿಯನ್ನು ವಾಹನಗಳಲ್ಲಿ ಬಳಸುವುದನ್ನು ಉತ್ತೇಜಿಸಬೇಕು ಎಂದರು.