
ದೀಪಾವಳಿ ನಂತ್ರ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ವಾಯು ಮಾಲಿನ್ಯ ಹೆಚ್ಚಾಗಿದೆ. ಇದಕ್ಕೆ ಪಟಾಕಿ ಕಾರಣ ಎನ್ನಲಾಗ್ತಾಯಿತ್ತು. ಆದ್ರೆ ಯುಎಸ್ ಬಾಹ್ಯಾಕಾಶ ಸಂಸ್ಥೆ ನಾಸಾ ತನ್ನ ವರದಿಯಲ್ಲಿ ಇದಕ್ಕೆ ಕಾರಣವೇನು ಎಂಬುದನ್ನು ಹೇಳಿದೆ. ನಾಸಾ ವರದಿ ಪ್ರಕಾರ, ದೆಹಲಿಯಲ್ಲಿ ವಾಯು ಮಾಲಿನ್ಯ ಹೆಚ್ಚಾಗಲು ನೆರೆ ರಾಜ್ಯ ಕಾರಣವೆಂದಿದೆ.
ದೆಹಲಿ ನೆರೆ ರಾಜ್ಯಗಳಾದ ಪಂಜಾಬ್ ಹಾಗೂ ಹರ್ಯಾಣದಲ್ಲಿ ಭತ್ತದ ಕಡ್ಡಿ ಸುಡಲಾಗಿದೆ. ಇದೇ ದೆಹಲಿಯ ವಾಯು ಮಾಲಿನ್ಯಕ್ಕೆ ಕಾರಣವಾಗಿದೆ. ನವೆಂಬರ್ 16 ರ ಹೊತ್ತಿಗೆ, ವಿಸಿಬಲ್ ಇನ್ಫ್ರಾರೆಡ್ ಇಮೇಜಿಂಗ್ ರೇಡಿಯೋಮೀಟರ್ ಸೂಟ್ ಸಂವೇದಕವು ಪಂಜಾಬ್ನಲ್ಲಿ 74,000 ಕ್ಕೂ ಹೆಚ್ಚು ಹಾಟ್ಸ್ಪಾಟ್ಗಳನ್ನು ಪತ್ತೆ ಮಾಡಿದೆ ಎಂದು ನಾಸಾ ವರದಿಯಲ್ಲಿ ತಿಳಿಸಿದೆ. ನವೆಂಬರ್ 11 ರಂದು, ಪಂಜಾಬ್ ಮತ್ತು ಹರಿಯಾಣದಲ್ಲಿ ಭತ್ತದ ಕಡ್ಡಿ ಸುಡುವಿಕೆ ವಾಯುವ್ಯ ಭಾರತದಲ್ಲಿ ಗಾಳಿಯ ಗುಣಮಟ್ಟದಲ್ಲಿ ತೀವ್ರ ಕುಸಿತವನ್ನು ಉಂಟುಮಾಡಿದೆ ಎಂದು ನಾಸಾ ಹೇಳಿದೆ.
ನವೆಂಬರ್ 11, 2021 ರಂದು, ಸುವೋಮಿ ಎನ್ಪಿಪಿ ಉಪಗ್ರಹದಲ್ಲಿ ವಿಐಆರ್ಎಸ್ ಪಂಜಾಬ್ ಮತ್ತು ಹರಿಯಾಣದಲ್ಲಿ ಬೆಂಕಿಯಿಂದ ಹೊರಹೊಮ್ಮುತ್ತಿರುವ ಬೃಹತ್ ಹೊಗೆಯನ್ನು ಕಂಡಿದೆ. ಇದು ಭಾರತದ ಅತ್ಯಂತ ಜನನಿಬಿಡ ನಗರಗಳಲ್ಲಿ ಒಂದಾದ ದೆಹಲಿಯತ್ತ ಸಾಗುತ್ತಿದೆ ಎಂದು ಯುಎಸ್ ಏಜೆನ್ಸಿ ತಿಳಿಸಿದೆ. ಈ ಹೊಗೆಗೆ ಪಾಕಿಸ್ತಾನದ ಬೆಂಕಿಯೂ ಕಾರಣವಾಗಿದೆ ಎಂದು ನಾಸಾ ಹೇಳಿದೆ.
ನಾಸಾದ ಮಾರ್ಷಲ್ ಸ್ಪೇಸ್ ಫ್ಲೈಟ್ ಸೆಂಟರ್ನಲ್ಲಿ ಕೆಲಸ ಮಾಡುತ್ತಿರುವ ಪವನ್ ಗುಪ್ತಾ, ನವೆಂಬರ್ 11 ರಂದು ಮಾತ್ರ ಕನಿಷ್ಠ 22 ಮಿಲಿಯನ್ ಜನರು ಪರಳಿ ಸುಡುವಿಕೆಯಿಂದ ಉತ್ಪತ್ತಿಯಾಗುವ ಹೊಗೆಯಿಂದ ಪ್ರಭಾವಿತರಾಗಿದ್ದಾರೆ ಎಂದಿದ್ದಾರೆ. ಭತ್ತದ ಕಟಾವಿನ ನಂತ್ರ ಹೊಲದಲ್ಲಿ ಉಳಿಯುವ ಭತ್ತದ ಕಡ್ಡಿಗಳನ್ನು ಸುಡಲಾಗುತ್ತದೆ. ಭತ್ತ ಹಾಗೂ ಗೋಧಿ ಬಿತ್ತನೆಯ ಅವಧಿಯ ನಡುವೆ ಹೆಚ್ಚಿನ ವ್ಯತ್ಯಾಸವಿರುವುದಿಲ್ಲ. ಬಿತ್ತನೆಯಲ್ಲಿ ವಿಳಂಬವಾದರೆ, ಗೋಧಿ ಉತ್ಪಾದನೆಯು ಗಮನಾರ್ಹವಾಗಿ ಕಡಿಮೆಯಾಗುತ್ತದೆ. ಹೊಲಗಳನ್ನು ತ್ವರಿತವಾಗಿ ಸಿದ್ಧಪಡಿಸಲು, ರೈತರು ಕಡ್ಡಿಗಳನ್ನು ಸುಡುತ್ತಾರೆ. ಇದರಿಂದ ದೇಶದ ರಾಜಧಾನಿ ದೆಹಲಿ ಮತ್ತು ಅದರ ಸುತ್ತಮುತ್ತಲಿನ ಪ್ರದೇಶಗಳು ಸುಮಾರು 45 ದಿನಗಳ ನಂತರ ದಟ್ಟವಾದ ಬೂದು ಹೊಗೆಯಿಂದ ಮುಚ್ಚಲ್ಪಡುತ್ತವೆ.