
ನವದೆಹಲಿ : ಮಾಜಿ ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಅವರನ್ನ ಮಧ್ಯಪ್ರದೇಶ ವಿಧಾನಸಭೆಯ ಹೊಸ ಸ್ಪೀಕರ್ ಆಗಿ ನೇಮಕ ಮಾಡಲಾಗಿದೆ.
ವರದಿಗಳ ಪ್ರಕಾರ, ಮಾಜಿ ಕೇಂದ್ರ ಸಚಿವ ಮತ್ತು ಈಗ ಡಿಮ್ನಿ ಶಾಸಕ ನರೇಂದ್ರ ತೋಮರ್ ಅವರನ್ನು ಮಧ್ಯಪ್ರದೇಶ ವಿಧಾನಸಭೆಯ ಸ್ಪೀಕರ್ ಆಗಿ ಆಯ್ಕೆಯಾಗಿದ್ದಾರೆ.
ಮಧ್ಯಪ್ರದೇಶದಲ್ಲಿ ಶಿವರಾಜ್ ಸಿಂಗ್ ಚೌಹಾಣ್ ನಂತರ ಮುಖ್ಯಮಂತ್ರಿಯಾಗಿ ಉಜ್ಜಯಿನಿ ದಕ್ಷಿಣ ಶಾಸಕ ಮೋಹನ್ ಯಾದವ್ ಅವರನ್ನು ಆಯ್ಕೆ ಮಾಡುವ ಮೂಲಕ ಬಿಜೆಪಿ ಅಚ್ಚರಿ ಮೂಡಿಸಿದೆ. ಶಿವರಾಜ್ ಸಿಂಗ್ ಸಂಪುಟದಲ್ಲಿ ಯಾದವ್ ಉನ್ನತ ಶಿಕ್ಷಣ ಸಚಿವರಾಗಿದ್ದರು.
ಯಾದವ್ ಅವರ ಹೆಸರು ಸಿಎಂ ಸಂಭಾವ್ಯರ ಸ್ಪರ್ಧೆಯಲ್ಲಿ ಎಲ್ಲಿಯೂ ಇರಲಿಲ್ಲ ಯಾದವ್ ಒಬಿಸಿ ವರ್ಗಕ್ಕೆ ಸೇರಿದವರು. ಮಧ್ಯಪ್ರದೇಶದಲ್ಲಿ ಶೇಕಡಾ 48 ರಷ್ಟು ಒಬಿಸಿ ಮತದಾರರಿದ್ದಾರೆ. ಒಬಿಸಿ ಮುಖ್ಯಮಂತ್ರಿಯನ್ನು ಆಯ್ಕೆ ಮಾಡುವ ಮೂಲಕ, 2024 ರ ಲೋಕಸಭಾ ಚುನಾವಣೆಗೆ ಮುಂಚಿತವಾಗಿ ಒಬಿಸಿ ಮತದಾರರನ್ನು ಸೆಳೆಯಲು ಬಿಜೆಪಿ ಪ್ರಯತ್ನಿಸುತ್ತಿದೆ.
ಮೋಹನ್ ಯಾದವ್ ಅವರು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ಎಬಿವಿಪಿ) ಮತ್ತು ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್ಎಸ್ಎಸ್) ದೊಂದಿಗೆ ಗುರುತಿಸಿಕೊಂಡಿದ್ದಾರೆ.
ಭೋಪಾಲ್ನಲ್ಲಿ ಇಂದು ಸಂಜೆ ನಡೆದ ಬಿಜೆಪಿ ಶಾಸಕಾಂಗ ಪಕ್ಷದ ಸಭೆಯಲ್ಲಿ ನಿರ್ಗಮಿತ ಸಿಎಂ ಶಿವರಾಜ್ ಸಿಂಗ್ ಚೌಹಾಣ್ ಮೋಹನ್ ಯಾದವ್ ಅವರ ಹೆಸರನ್ನು ಪ್ರಸ್ತಾಪಿಸಿದರು. ವಿಧಾನಸಭಾ ಚುನಾವಣೆಯ ಫಲಿತಾಂಶಗಳು ಪ್ರಕಟವಾದ ಎಂಟು ದಿನಗಳ ನಂತರ ಶಾಸಕರು ತಮ್ಮ ಮುಖ್ಯಮಂತ್ರಿಯನ್ನು ಆಯ್ಕೆ ಮಾಡಿದರು. ಮೋಹನ್ ಯಾದವ್ ಇಬ್ಬರು ಉಪಮುಖ್ಯಮಂತ್ರಿಗಳನ್ನು ಹೊಂದುವ ಸಾಧ್ಯತೆಯಿದೆ. ಆದರೆ, ಉಪಮುಖ್ಯಮಂತ್ರಿಗಳ ಹೆಸರನ್ನು ಇನ್ನೂ ಘೋಷಿಸಲಾಗಿಲ್ಲ.
ಮೂವರು ಕೇಂದ್ರ ವೀಕ್ಷಕರಾದ ಮನೋಹರ್ ಲಾಲ್ ಖಟ್ಟರ್, ಡಾ.ಕೆ.ಲಕ್ಷ್ಮಣ್ ಮತ್ತು ಆಶಾ ಲಾಕ್ರಾ ಅವರ ಸಮ್ಮುಖದಲ್ಲಿ ಬಿಜೆಪಿ ಶಾಸಕಾಂಗ ಪಕ್ಷದ ಸಭೆ ನಡೆಯಿತು. ಬಿಜೆಪಿ ಶಾಸಕಾಂಗ ಪಕ್ಷದ ಸಭೆಗೂ ಮುನ್ನ ಕೇಂದ್ರ ವೀಕ್ಷಕರೊಂದಿಗೆ ಹೊಸದಾಗಿ ಆಯ್ಕೆಯಾದ ಶಾಸಕರ ಫೋಟೋ ಸೆಷನ್ ನಡೆಯಿತು.