
ರಾಮನಗರ: ರಾಜ್ಯದಲ್ಲಿ 150 ಸ್ಥಾನಗಳನ್ನು ಗೆದ್ದು ಬಿಜೆಪಿ ಅಧಿಕಾರ ಹಿಡಿಯಲಿದೆ ಎಂದು ಪಕ್ಷದ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದ್ದಾರೆ.
ರಾಮನಗರ ತಾಲೂಕಿನ ಬಿಡದಿಯಲ್ಲಿ ವಿಜಯ ಸಂಕಲ್ಪ ಯಾತ್ರೆಯಲ್ಲಿ ಮಾತನಾಡಿದ ಅವರು, ಕಾಶ್ಮೀರದಿಂದ ಕನ್ಯಾಕುಮಾರಿವರೆಗೂ ಕಮಲ ಅರಳುತ್ತದೆ. ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ನಿರುದ್ಯೋಗಿಗಳಾಗುತ್ತಾರೆ. ತಾಕತ್ತಿದ್ದರೆ ನಮ್ಮ ಅಶ್ವಮೇಧ ಯಾಗ ತಡೆಯಿರಿ ಎಂದು ಹೇಳಿದ್ದಾರೆ.
ಈ ಬಾರಿ ಜೆಡಿಎಸ್ ಪಕ್ಷ ಅರಬ್ಬಿ ಸಮುದ್ರದ ಒಳಗೆ ಸೇರುತ್ತದೆ. ಮುಂದಿನ ದಿನಗಳಲ್ಲಿ ರಾಮನಗರ, ಚನ್ನಪಟ್ಟಣ, ಮಾಗಡಿ ನಿಮ್ಮದಲ್ಲ. ಈ ಕ್ಷೇತ್ರಗಳು ಕಮಲದ ಪಾಲಾಗುತ್ತವೆ. ದೇವೇಗೌಡರೇ, ಕುಮಾರಸ್ವಾಮಿಯವರೇ ಪರಿವರ್ತನೆ ಕಾಲ ಆರಂಭವಾಗಿದೆ ಎಂದು ಹೇಳಿದ್ದಾರೆ.
ಮನಮೋಹನ್ ಸಿಂಗ್ ಇದ್ದಿದ್ದರೆ ಲಸಿಕೆ ಕಂಡುಹಿಡಿಯುತ್ತಿರಲಿಲ್ಲ. ಲಸಿಕೆ ಕಂಡುಹಿಡಿದರೂ ಸೋನಿಯಾ ಗಾಂಧಿ, ರಾಹುಲ್ ಗಾಂಧಿಯವರಿಗೆ ಮೊದಲು ಕೊಡುತ್ತಿದ್ದರು. ಆದರೆ, ಮೋದಿ ಅವರು ಮೊದಲಿಗೆ ವೈದ್ಯರು, ನರ್ಸ್ ಗಳಿಗೆ ಲಸಿಕೆ ನೀಡಿದ್ದರು. ಮಾರ್ಚ್ 12ರಂದು ಹೈವೇ ಉದ್ಘಾಟನೆಗೆ ಪ್ರಧಾನಿಯವರು ಬರುತ್ತಾರೆ ಎಂದು ಹೇಳಿದ್ದಾರೆ.